ADVERTISEMENT

ಕೌಶಲವಿದ್ದಲ್ಲಿ ಸ್ವಾವಲಂಬಿ ಜೀವನ ಸಾಧ್ಯ: ಸಂಸದ ಕಾಗೇರಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 5:51 IST
Last Updated 2 ಜನವರಿ 2026, 5:51 IST
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಆಯೋಜಿಸಿದ್ದ ಅಮರ ಶಿಲ್ಪಿ ಜಕಣಾಚಾರ್ಯ ಸಂಸ್ಮರಣಾ ದಿನದ ಅಂಗವಾಗಿ ಜಕಣಾಚಾರ್ಯರ ಭಾವಚಿತ್ರಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪುಷ್ಪನಮನ ಸಲ್ಲಿಸಿದರು
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಆಯೋಜಿಸಿದ್ದ ಅಮರ ಶಿಲ್ಪಿ ಜಕಣಾಚಾರ್ಯ ಸಂಸ್ಮರಣಾ ದಿನದ ಅಂಗವಾಗಿ ಜಕಣಾಚಾರ್ಯರ ಭಾವಚಿತ್ರಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪುಷ್ಪನಮನ ಸಲ್ಲಿಸಿದರು   

ಶಿರಸಿ: ‘ಜಿಲ್ಲೆಯಲ್ಲಿ ವಿಶ್ವಕರ್ಮ ಸಮಾಜವು ಸಣ್ಣ ಸಮುದಾಯವಾಗಿದ್ದು, ಸಂಘಟಿತರಾದಾಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ತಾಲ್ಲೂಕಿನ ಬನವಾಸಿಯ ಮಧುಕೇಶ್ವರ ದೇವಾಲಯದ ಆವರಣದಲ್ಲಿ ಗುರುವಾರ ಅಮರ ಶಿಲ್ಪಿ ಜಕಣಾಚಾರ್ಯ ಸಂಸ್ಮರಣಾ ದಿನದ ಅಂಗವಾಗಿ ಜಕಣಾಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

​‘ವಿಶ್ವಕರ್ಮ ಸಮುದಾಯವು ರಾಷ್ಟ್ರ ನಿರ್ಮಾಣದ ಶಿಲ್ಪಿಗಳು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದು, ಇದು ಸಮುದಾಯದ ಕೌಶಲಕ್ಕೆ ಸಂದ ಗೌರವವಾಗಿದೆ. ಶಿಲೆಯಲ್ಲಿ ಭಗವಂತನನ್ನು ಕಾಣುವಂತೆ ಮಾಡಿದ ಜಕಣಾಚಾರ್ಯರು ಸಮುದಾಯಕ್ಕೆ ಆತ್ಮವಿಶ್ವಾಸ ಹಾಗೂ ಸ್ವಾವಲಂಬಿ ಜೀವನದ ಪಾಠ ಕಲಿಸಿದ್ದಾರೆ. ನಾವು ಹಲವರನ್ನು ಅಧಿಕಾರದ ಕಾರಣಕ್ಕೆ ಸ್ಮರಿಸುವುದಿಲ್ಲ, ಬದಲಿಗೆ ಅವರ ಜ್ಞಾನ, ಕೌಶಲ, ಸಾಧನೆ ಮತ್ತು ತ್ಯಾಗಕ್ಕಾಗಿ ಸ್ಮರಿಸುತ್ತೇವೆ. ಜಕಣಾಚಾರ್ಯರು ಅಂತಹ ಮಹಾನ್ ಸಾಧಕರಾಗಿದ್ದು, ಅವರ ಕೌಶಲವನ್ನು ಇಂದಿನ ಯುವ ಪೀಳಿಗೆಗೆ ಕಲಿಸುವ ಅಗತ್ಯವಿದೆ’ ಎಂದು ಕಾಗೇರಿ ತಿಳಿಸಿದರು.

ADVERTISEMENT

‘​ಪಿಎಂ ವಿಶ್ವಕರ್ಮ ಯೋಜನೆಯ ಮೂಲಕ 18 ವಿವಿಧ ವಿಭಾಗಗಳಲ್ಲಿ ಯುವಕರ ಕೌಶಲ ವೃದ್ಧಿಸುವ ಕಾರ್ಯ ನಡೆಯುತ್ತಿದೆ. ಜಿಲ್ಲೆಯ ಸುಮಾರು 5 ಸಾವಿರ ಯುವಕರಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಉದ್ಯೋಗಕ್ಕೆ ಪೂರಕವಾದ ಸಲಕರಣೆ ಹಾಗೂ ಸಾಲದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಯುವ ಸಮುದಾಯವು ಕೌಶಲಪ್ರಜ್ಞೆ ಹೆಚ್ಚಿಸಿಕೊಂಡಾಗ ಮಾತ್ರ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಿದೆ’ ಎಂದು ತಿಳಿಸಿದರು.

​ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಶಿರಸಿ ಘಟಕದ ಅಧ್ಯಕ್ಷ ವಿಶ್ವನಾಥ ಆಚಾರ್ಯ, ಬನವಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿಬಿ ಆಯೇಷಾ, ಅಂಕೋಲಾ ಮಹಾಂಕಾಳಿ ದೇವಾಲಯದ ಅಧ್ಯಕ್ಷ ದತ್ತ ಎಂ. ಆಚಾರ್ಯ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘಗಳ ಅಧ್ಯಕ್ಷ ಎ.ಕೆ. ನಾಯ್ಕ, ಪ್ರಮುಖರಾದ ರಜತಕುಮಾರ ಹುಬ್ಬ, ಪ್ರಶಾಂತ ಆಚಾರ್ಯ, ಮಧುಕರ ಆಚಾರ್ಯ, ಗಜಾನನ ಆಚಾರ್ಯ ಹಾಗೂ ರಮೇಶ ನಾಯ್ಕ ಕುಪ್ಪಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.