ADVERTISEMENT

ಕೇಬಲ್ ಕಳವು: ರೈಲ್ವೆ ಉದ್ಯೋಗಿ ಸೇರಿ ಆರು ಮಂದಿ ಬಂಧನ

₹ 15 ಲಕ್ಷ ಮೌಲ್ಯದ 470 ಕೆ.ಜಿ ತಾಮ್ರದ ತಂತಿ ಜಪ್ತಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 16:51 IST
Last Updated 7 ಜೂನ್ 2021, 16:51 IST
ಕೇಬಲ್ ಕಳವು ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಜೊಯಿಡಾ ತಾಲ್ಲೂಕಿನ ರಾಮನಗರ ಠಾಣೆ ಪೊಲೀಸರು ಬಂಧಿಸಿ, ತಾಮ್ರದ ತಂತಿಗಳನ್ನು ವಶ ಪಡಿಸಿಕೊಂಡಿರುವುದು
ಕೇಬಲ್ ಕಳವು ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಜೊಯಿಡಾ ತಾಲ್ಲೂಕಿನ ರಾಮನಗರ ಠಾಣೆ ಪೊಲೀಸರು ಬಂಧಿಸಿ, ತಾಮ್ರದ ತಂತಿಗಳನ್ನು ವಶ ಪಡಿಸಿಕೊಂಡಿರುವುದು   

ಜೊಯಿಡಾ: ತಾಲ್ಲೂಕಿನ ಕ್ಯಾಸಲ್‌ರಾಕ್‍ ರೈಲು ನಿಲ್ದಾಣದ ಸಮೀಪ ಕೇಬಲ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹ 15 ಲಕ್ಷ ಮೌಲ್ಯದ 470 ಕೆ.ಜಿ ತಾಮ್ರದ ತಂತಿಗಳನ್ನು ಜಪ್ತಿ ಮಾಡಿದ್ದಾರೆ.

ಕದ್ದ ಕೇಬಲ್‌ಗಳನ್ನು ಸುಟ್ಟು ಅದರಿಂದ ತಾಮ್ರದ ತಂತಿಗಳನ್ನು ತೆಗೆಯುತ್ತಿದ್ದ ಈ ಜಾಲದಲ್ಲಿ ರೈಲ್ವೆ ಉದ್ಯೋಗಿಯೂ ಸೇರಿದ್ದಾರೆ. ಪ್ರಸ್ತುತ ಕ್ಯಾಸಲ್‌ರಾಕ್‌ನ ರೈಲ್ವೆ ವಸತಿ ನಿಲಯದ ನಿವಾಸಿ,ಗೋಕಾಕ ತಾಲ್ಲೂಕು ದಾಸನಟ್ಟಿಯ ಯಲ್ಲಪ್ಪ ಕುಪ್ಪನ್ನವರ (38) ಸೆರೆ ಸಿಕ್ಕಿದ್ದಾರೆ.

ಉಳಿದಂತೆ, ದಾಂಡೇಲಿಯ ಗಾಂಧಿನಗರದ ನಿವಾಸಿಗಳಾದ, ಕೂಲಿ ಕೆಲಸ ಮಾಡುತ್ತಿದ್ದ ಅಜಯ ಕಂಜರಬಾಟ (30), ಸೋನು ಕಂಜರಬಾಟ (25), ಜಿತೇಂದ್ರ ಮಾಸ್ರಿ (38), ದೀಪಕ ಕಂಜರಬಾಟ (32), ಜಿಗನು ಕಂಜರಬಾಟ (45) ಬಂಧಿತ ಇತರ ಆರೋಪಿಗಳು.

ADVERTISEMENT

ಪ್ರಕರಣದ ತನಿಖೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ವಿಶೇಷ ತಂಡವನ್ನು ರಚಿಸಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದ್ರಿನಾಥ.ಎಸ್, ದಾಂಡೇಲಿ ಡಿ.ವೈ.ಎಸ್.ಪಿ ಕೆ.ಎಲ್.ಗಣೇಶ ಅವರ ಮಾರ್ಗದರ್ಶನದಲ್ಲಿ ದಾಂಡೇಲಿ ಪ್ರಭಾರ ಸಿ.ಪಿ.ಐ ಪ್ರಭು ಆರ್ ಗಂಗೇನಹಳ್ಳಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. ರಾಮನಗರ ಠಾಣೆಯ ಪಿ.ಎಸ್.ಐ.ಗಳಾದ ಕಿರಣಕುಮಾರ ಪಾಟೀಲ್, ಎಲ್.ಎಲ್.ಪೂಜಾರಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.