ಶಿರಸಿ: ಸಾಮಾಜಿಕ ಕಳಕಳಿಯ ಪೊಲೀಸ್ ಸಿಬ್ಬಂದಿ ಪುತ್ರನ ನಾಮಕರಣ ಆಮಂತ್ರಣ ಪತ್ರಿಕೆಯಲ್ಲಿ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಸಂದೇಶ ಪ್ರಕಟಿಸಿ ಗಮನ ಸೆಳೆದಿದ್ದಾರೆ.
ತಾಲ್ಲೂಕಿನ ಬನವಾಸಿ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ನಾರಾಯಣ ಎಂ.ಎಸ್. ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಸೈಬರ್ ಅಪರಾಧದಿಂದ ಉಂಟಾಗುವ ತೊಂದರೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ, ಆಹ್ವಾನ ಪತ್ರಿಕೆಯಲ್ಲಿ ಸೈಬರ್ ಅಪರಾಧವಾದಾಗ ತುರ್ತು ಪರಿಸ್ಥಿತಿ ಮತ್ತು ಮಕ್ಕಳ ಸಹಾಯವಾಣಿ ಹಾಗೂ ಕಳೆದು ಹೋದ ಮೊಬೈಲ್ ದುರ್ಬಳಕೆ ತಡೆಯುವ ಕುರಿತು ಸಂದೇಶ ಪ್ರಕಟಿಸಿದ್ದಾರೆ.
ಹಾವೇರಿ ಜಿಲ್ಲೆಯ ತಿಳವಳ್ಳಿ ಗ್ರಾಮದ ನಾರಾಯಣ ಎಂ.ಎಸ್. ಪೊಲೀಸ್ ಇಲಾಖೆ ತರಬೇತಿ ಅವಧಿಯಲ್ಲಿ ಗೃಹ ಸಚಿವರಿಂದ ‘ಸರ್ವೋತ್ತಮ ಪ್ರಶಿಕ್ಷಣಾರ್ಥಿ’ ಪ್ರಶಸ್ತಿ ಪಡೆದಿದ್ದು, ತಮ್ಮ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಸೈಬರ್ ಅಪರಾಧಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಜಾಗೃತಿ ಮೂಡಿಸಿ ಸಾಮಾಜಿಕ ಕಾಳಜಿ ಮೆರೆದಿದ್ದಕ್ಕಾಗಿ ಕರ್ನಾಟಕ ಅಚೀವರ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಪಡೆದಿದ್ದರು.
‘ಈಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳಿಂದ ಅನೇಕ ಜನರು ತೊಂದರೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಖಾಸಗಿ ಬದುಕಿನ ಎಲ್ಲ ಕ್ಷಣಗಳಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು. ಆಗ ಸಮಾಜ ಅಪರಾಧ ಮುಕ್ತವಾಗುತ್ತದೆ’ ಎನ್ನುತ್ತಾರೆ ಅವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.