ADVERTISEMENT

ಶಿರಸಿ: ವಿದ್ಯುತ್ ಕಾಣದ ಗ್ರಿಡ್; ಯೋಜನೆ ನನೆಗುದಿಗೆ

ಬನವಾಸಿ ಭಾಗದ ರೈತರಿಗೆ ಅನುಕೂಲವಾಗದ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 6:53 IST
Last Updated 14 ಫೆಬ್ರುವರಿ 2026, 6:53 IST
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಸಮರ್ಪಕ ವಿದ್ಯುತ್ ಇಲ್ಲದ ಕಾರಣಕ್ಕೆ ಕಾರ್ಯಾರಂಭ ಮಾಡದೆ ಬಾಗಿಲು ಮುಚ್ಚಿರುವ ಏತ ನೀರಾವರಿ ಯೋಜನೆಯ ಪಂಪ್ ಹೌಸ್
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಸಮರ್ಪಕ ವಿದ್ಯುತ್ ಇಲ್ಲದ ಕಾರಣಕ್ಕೆ ಕಾರ್ಯಾರಂಭ ಮಾಡದೆ ಬಾಗಿಲು ಮುಚ್ಚಿರುವ ಏತ ನೀರಾವರಿ ಯೋಜನೆಯ ಪಂಪ್ ಹೌಸ್   

ರಾಜೇಂದ್ರ ಹೆಗಡೆ

ಶಿರಸಿ: ಬನವಾಸಿ ಹೋಬಳಿಯ ಕಡಗೋಡ ಬಳಿ ನಿರ್ಮಿಸಲಾದ 110 ಕೆ.ವಿ. ವಿದ್ಯುತ್ ಗ್ರಿಡ್‌ ನಿರ್ಮಾಣಗೊಂಡ ವರ್ಷಗಳು ಕಳೆದರೂ ವಿದ್ಯುತ್ ಸಂಪರ್ಕ ಪಡೆದಿಲ್ಲ. ಇದರಿಂದ ಕೆರೆ ತುಂಬಿಸುವ ಯೋಜನೆ ಕಾರ್ಯರೂಪಕ್ಕೆ ಬರುವುದಕ್ಕೆ ಅಡ್ಡಿಯಾಗಿದ್ದರೆ, ಅಂಡಗಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಶೀತಲೀಕರಣ ಘಟಕ ಕಾರ್ಯನಿರ್ವಹಿಸಲಾಗದ ಸ್ಥಿತಿ ಎದುರಾಗಿದೆ.

ಬನವಾಸಿ ಹೋಬಳಿಯ ಸುಮಾರು 15 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾಗೂ ಕೃಷಿ ಪಂಪ್‌ಸೆಟ್‌ಗಳಿಗೆ 25 ಕಿ.ಮೀ. ದೂರದ ಶಿರಸಿ ಮುಖ್ಯ ಗ್ರಿಡ್‌ನಿಂದಲೇ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಒಂದೇ ಮಾರ್ಗದ ಮೇಲೆ ಅತಿಯಾದ ಒತ್ತಡ ಇರುವುದರಿಂದ ವೋಲ್ಟೇಜ್ ಸಮಸ್ಯೆ ಉಂಟಾಗಿದೆ ಎಂಬುದು ರೈತರ ದೂರು.

ADVERTISEMENT

2017ರಲ್ಲೇ ಪೂರ್ಣಗೊಂಡಿರುವ ಕೆರೆ ತುಂಬಿಸುವ ಯೋಜನೆ ನನೆಗುದಿಗೆ ಬಿದ್ದಿದೆ. ಪಂಪ್ ಹೌಸ್, ಪೈಪ್‌ಲೈನ್ ಕಾಮಗಾರಿ ಮುಗಿದಿದ್ದರೂ, ಪಂಪ್‌ಸೆಟ್‌ಗಳ ಮೂಲಕ ನೀರು ಎತ್ತಲು ಅಗತ್ಯವಾದ ವೋಲ್ಟೇಜ್ ಇಲ್ಲದೆ ಯೋಜನೆ ಕಾರ್ಯಾನುಷ್ಠಾನಗೊಂಡಿಲ್ಲ. ಅಂಡಗಿ ಬಳಿಯ ಶೀತಲೀಕರಣ ಘಟಕಕ್ಕೂ ವಿದ್ಯುತ್ ಪೂರೈಕೆ ಇಲ್ಲದಂತಾಗಿ ಕಾರ್ಯಾರಂಭ ವಿಳಂಬವಾಗಿದೆ ಎಂಬುದು ರೈತರ ಆರೋಪ.

‘ಶಿವಮೊಗ್ಗ ಜಿಲ್ಲೆಯ ಜಡೆ ಗ್ರಿಡ್‌ನಿಂದ 9.81 ಕಿ.ಮೀ. ದೂರದ ಮಾರ್ಗ ನಿರ್ಮಿಸಲು ಕೆಪಿಟಿಸಿಎಲ್ ನೀಲನಕ್ಷೆ ಸಿದ್ಧಪಡಿಸಿತ್ತು. ಒಟ್ಟು 38 ಟವರ್ ಲೈನ್ ಕಂಬಗಳ ಪೈಕಿ 35 ಕಂಬಗಳ ನಿರ್ಮಾಣ ಪೂರ್ಣಗೊಂಡಿದೆ. ಆದರೆ, ಕೇವಲ ಮೂರು ಕಂಬಗಳ ನಿರ್ಮಾಣಕ್ಕೆ ಭೂಮಿ ನೀಡಲು ಸ್ಥಳೀಯ ರೈತರು ಪಟ್ಟು ಹಿಡಿದಿರುವುದು ಯೋಜನೆಗೆ ಅಡ್ಡಿಯಾಗಿದೆ. ಈ ಮೊದಲು ಕೋರ್ಟ್ ಮೊರೆ ಹೋಗಿದ್ದ 13 ರೈತರ ಪೈಕಿ 10 ರೈತರು ಒಪ್ಪಿಗೆ ಸೂಚಿಸಿ ಅಲ್ಲಿ ಟವರ್ ನಿರ್ಮಾಣವಾಗಿದೆ. ಆದರೆ, ಮೂವರು ರೈತರು ಮಾತ್ರ ಪರಿಹಾರದ ಮೊತ್ತ ಹೆಚ್ಚಿಸಿದರೂ ಜಾಗ ಬಿಟ್ಟು ಕೊಡುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

‘ಬೇಸಿಗೆ ಆರಂಭವಾಗುತ್ತಿದ್ದು, ಈ ಹೊತ್ತಿನಲ್ಲಿ ಏತ ನೀರಾವರಿ ಕಾರ್ಯನಿರ್ವಹಿಸದಿದ್ದರೆ ಕೆರೆಗಳಲ್ಲಿ ನೀರಿಲ್ಲದೆ ಬೆಳೆಗಳು ಒಣಗಲಿವೆ. ಮೂವರು ರೈತರ ಪಟ್ಟಿನಿಂದಾಗಿ ಸಾವಿರಾರು ರೈತರ ಬದುಕು ಅತಂತ್ರವಾಗಿದೆ’ ಎಂದು ಬನವಾಸಿಯ ಕೃಷಿಕ ರಘುಪತಿ ಗೌಡ ಆತಂಕ ವ್ಯಕ್ತಪಡಿಸಿದರು.

ಕೋರ್ಟ್ ಮೊರೆ ಹೋಗಿರುವ ರೈತರ ಜತೆ ಮಾತುಕತೆ ನಡೆಸಿ ಶೀಘ್ರದಲ್ಲಿ ಟವರ್ ಲೈನ್ ಕಂಬಗಳ ನಿರ್ಮಾಣಕ್ಕೆ ಕ್ರಮವಹಿಸಲು ಶ್ರಮಿಸಲಾಗುತ್ತಿದೆ
ಶಿವರಾಮ ಹೆಬ್ಬಾರ ಶಾಸಕ

ತಂಪಾಗದ ರೈತರ ಬದುಕು

‘ಬನವಾಸಿ ಹೋಬಳಿಯ ರೈತರು ತರಕಾರಿ ಮತ್ತು ಅನಾನಸ್ ಹಣ್ಣುಗಳನ್ನು ಸಂರಕ್ಷಿಸಿಡಲು ಶೀತಲೀಕರಣ ಘಟಕದ ಮೇಲೆ ಅಪಾರ ಭರವಸೆ ಇಟ್ಟಿದ್ದರು. ಆದರೆ ವಿದ್ಯುತ್ ಗ್ರಿಡ್ ಕಾರ್ಯಾರಂಭ ಮಾಡದ ಕಾರಣ ಈ ಘಟಕವು ಕೇವಲ ಕಟ್ಟಡವಾಗಿ ಉಳಿದಿದೆ. ಯಂತ್ರೋಪಕರಣಗಳು ಕಾರ್ಯನಿರ್ವಹಿಸಲು ಅಗತ್ಯದಷ್ಟು ವಿದ್ಯುತ್ ಪೂರೈಕೆ ಕಷ್ಟಸಾಧ್ಯವಾಗಿದೆ’ ಎಂದು ಬನವಾಸಿ ಭಾಗದ ರೈತರು ದೂರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.