ಶಿರಸಿ: ‘ಬೆಳೆ ಸಮೀಕ್ಷೆಯಲ್ಲಿ ಉಂಟಾಗುತ್ತಿರುವ ಗೊಂದಲಗಳ ಪರಿಣಾಮ ಪಹಣಿ ಪತ್ರದಲ್ಲಿ ದೋಷ ಕಾಣಿಸಿಕೊಳ್ಳುತ್ತಿರುವುದರಿಂದ ದೀರ್ಘಾವಧಿ ಬೆಳೆ ಸಮೀಕ್ಷೆ ಕೈಬಿಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ’ ಎಂದು ಗ್ರೇಡ್–2 ತಹಶೀಲ್ದಾರ್ ರಮೇಶ ಹೆಗಡೆ ಹೇಳೀದರು.
ಆಡಳಿತಾಧಿಕಾರಿ ಬಿ.ಪಿ.ಸತೀಶ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಇಲ್ಲಿನ ತಾಲ್ಲೂಕು ಪಂಚಾಯ್ತಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
‘ಪ್ರತಿ ಬಾರಿ ನೂರಾರು ರೈತರು ಪಹಣಿ ಪತ್ರದಲ್ಲಿ ಉಂಟಾಗುವ ದೋಷದ ಸಮಸ್ಯೆ ಎದುರಿಸುತ್ತಿದ್ದಾರೆ. ಪಶ್ಚಿಮ ಭಾಗದಲ್ಲಿ ಅಡಿಕೆ ಖಾಯಂ ಬೆಳೆಯಾಗಿದ್ದು, ಇಲ್ಲಿ ಪ್ರತಿ ಬಾರಿ ಸಮೀಕ್ಷೆ ನಡೆಸುವ ಅಗತ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲಾಗಿದೆ’ ಎಂದು ಹೇಳಿದರು.
‘ಪ್ರಸಕ್ತ ಸಾಲಿನ ಬೆಳೆ ಸಮೀಕ್ಷೆ ಕಾರ್ಯ ಆರಂಭಗೊಂಡಿದೆ. ರೈತರಿಗೆ ಸಮೀಕ್ಷೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ್ದೇವೆ. ಸ್ಥಳೀಯ ಖಾಸಗಿ ಜನರನ್ನು (ಪಿ.ಆರ್.) ನಿಯೋಜಿಸಿ ಸಮೀಕ್ಷೆ ನಡೆಸಲಾಗುವುದು. ತಾಲ್ಲೂಕಿನಲ್ಲಿ 64 ಸಾವಿರ ಪ್ಲಾಟ್ ಸಮೀಕ್ಷೆ ನಡೆಸಬೇಕಿದ್ದು, ಸದ್ಯ 100 ಮಾತ್ರ ಮುಗಿದಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಧುಕರ ನಾಯ್ಕ ತಿಳಿಸಿದರು.
‘ನರೇಗಾ ಯೋಜನೆಯಲ್ಲಿ ಶಾಲೆಗಳಲ್ಲಿ ಕೈ ತೋಟ ಮಾಡುವ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಯೋಜನೆ ಅನುಷ್ಠಾನ ಮಾಡಬಹುದಾದ ಶಾಲೆಗಳನ್ನು ಗುರುತಿಸಲು ಆಡಳಿತಾಧಿಕಾರಿ ಸೂಚಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಫ್.ಜಿ.ಚಿನ್ನಣ್ಣನವರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.