ADVERTISEMENT

ಶಿರಸಿ | ಕೊರೊನಾ ಭೀತಿ: ನಿರ್ಬಂಧದಿಂದ ನಷ್ಟ ಅನುಭವಿಸಿದವರಿಗೆ ಜನರ ನೆರವು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2020, 18:34 IST
Last Updated 15 ಮಾರ್ಚ್ 2020, 18:34 IST
ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಕೊಟ್ಟರು.
ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಕೊಟ್ಟರು.   

ಶಿರಸಿ: ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೀಡಿರುವ ಆದೇಶದಂತೆ ಇಲ್ಲಿನ ಮಾರಿಕಾಂಬಾ ಜಾತ್ರಾ ಅಂಗಡಿಗಳು, ನಾಟಕ, ಸರ್ಕಸ್, ಮನರಂಜನಾ ಆಟಿಕೆಗಳ ಪಾರ್ಕ್ ಮುಚ್ಚಲಾಗಿದೆ. ಇದರಿಂದ ಇವುಗಳ ಮಾಲೀಕರು ಆರ್ಥಿಕ ನಷ್ಟ ಎದುರಿಸುವಂತಾಗಿದೆ. ಇಲ್ಲಿ ಕೆಲಸ ಮಾಡುವವರಿಗೆ, ಹೊರ ಊರಿನಿಂದ ಬಂದಿರುವ ವ್ಯಾಪಾರಸ್ಥರಿಗೆ ನಿತ್ಯದ ಊಟಕ್ಕೂ ಸಮಸ್ಯೆ ಎದುರಾಗಿದೆ.

ಈ ಬಗ್ಗೆ ಭಾನುವಾರ ಸಂಜೆ ಚರ್ಚಿಸಿದ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿಯ ತೊಂದರೆಗೊಳಗಾದವರ ನೆರವಿಗೆ ಮುಂದಾಗಿದೆ. ಇವರೆಲ್ಲರಿಗೆ ದೇವಸ್ಥಾನದ ವತಿಯಿಂದ ಊಟ ವ್ಯವಸ್ಥೆಗೊಳಿಸಲಿದೆ.

ಮಧ್ಯಾಹ್ನ 12 ರಿಂದ 3 ಮತ್ತು ಸಂಜೆ 7 ರಿಂದ 9 ಗಂಟೆಗೆ ಪ್ರತಿದಿನ ದೇವಸ್ಥಾನದಲ್ಲಿ ಊಟದ ವ್ಯವಸ್ಥೆ ಇರುತ್ತದೆ. ಅಂಗಡಿಕಾರರು, ನಾಟಕ ಮಂಡಳಿಯವರು, ಸರ್ಕಸ್ ಕಂಪನಿಯವರು ತಮ್ಮ ಸಂಸ್ಥೆಯ ಸಿಬ್ಬಂದಿಗೆ ಎಷ್ಟು ಊಟದ ಅಗತ್ಯ ಇದೆ ಎನ್ನುವುದನ್ನು ದೇವಸ್ಥಾನದ ಕಚೇರಿಗೆ ತಿಳಿಸಿ ಅಷ್ಟು ಟೋಕನ್ ಪಡೆದು ಊಟ ಮಾಡಿಕೊಳ್ಳಬಹುದು ಎಂದು ಆಡಳಿತ ಮಂಡಳಿ ತಿಳಿಸಿದೆ.

ADVERTISEMENT

ಸಾರ್ವಜ‌ನಿಕರಿಂದ‌ ನೆರವಿನ ಹಸ್ತ:ತೊಂದರೆಯಲ್ಲಿರುವ‌ ನಾಟಕದ ಕಂಪನಿ, ಸರ್ಕಸ್ ಕಂಪನಿಯವರಿಗೆ, ಊರಿನ ಕೆಲ ಉತ್ಸಾಹಿಗಳು ಮುಂದಾಗಿ ಭಾನುವಾರ ಮೂರು ಕ್ವಿಂಟಲ್‌‌ ಅಕ್ಕಿ, ಬೇಳೆ, ತರಕಾರಿ ಸಂಗ್ರಹಿಸಿಕೊಟ್ಟು, ಮಾನವೀಯತೆ ತೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.