ಶಿರಸಿ: ತಾಲ್ಲೂಕಿನೆಲ್ಲೆಡೆ ಮಂಗಳವಾರ ಇಡೀದಿನ ಮಳೆ ಸುರಿಯಿತು. ಅಬ್ಬರದ ಮಳೆಗೆ ಜಲಮೂಲಗಳ ಮಟ್ಟ ಏರಿಕೆಯಾಗಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ.
ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಬೆಳಿಗ್ಗೆಯಿಂದ ಸುರಿಯಲು ಆರಂಭಿಸಿದ ಮಳೆ ಸಂಜೆಯವರೆಗೂ ಮುಂದುವರಿಯಿತು. ಇದರಿಂದ ನಗರದ ಕೆಲ ಚರಂಡಿಗಳು ತುಂಬಿ ರಸ್ತೆಯ ಮೇಲೆ ನೀರು ಹರಿಯಿತು. ನಗರಸಭೆ ವ್ಯಾಪ್ತಿಯ ಗಣೇಶನಗರದ ಗೋಸಾವಿ ಗಲ್ಲಿಯಲ್ಲಿ ಹಿಂದೂರಾಮ್ ಗೋಸಾವಿ ಅವರ ಮನೆಯ ಹಿಂಬದಿಯ ಧರೆ ಕುಸಿತವಾಗಿದ್ದು, ಆತಂಕ ಮೂಡಿಸಿತ್ತು. ತಕ್ಷಣ ನಗರಸಭೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿದ್ದಾರೆ. ಮಳೆಯ ರಭಸಕ್ಕೆ ದೇವಿಕೆರೆ ಉದ್ಯಾನದಲ್ಲಿ ಒಣಗಿದ್ದ ಮರವೊಂದು ರಸ್ತೆಗೆ ಬಿದ್ದಿದೆ. ಈ ವೇಳೆ ರಸ್ತೆ ಪಕ್ಕ ಹಣ್ಣು ಮಾರುತ್ತಿದ್ದ ವ್ಯಕ್ತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉತ್ತಮ ಮಳೆಯಾಗುತ್ತಿರುವ ಕಾರಣ ರೈತರು ಭೂಮಿ ಹದಗೊಳಿಸುವ ಕಾರ್ಯಕ್ಕೆ ಸಿದ್ಧತೆ ನಡೆಸಿದ್ದಾರೆ. ಬನವಾಸಿ ಭಾಗದಲ್ಲಿ ಕೃಷಿ ಚಟುವಟಿಕೆಗೆ ವೇಗ ಸಿಕ್ಕಿದ್ದು, ಗೊಬ್ಬರ, ಬೀಜ ಖರೀದಿಯಲ್ಲಿ ರೈತರು ಆಸಕ್ತಿ ತೋರುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.