ಭಟ್ಕಳ: ತಾಲ್ಲೂಕಿನಲ್ಲಿ ಗುರುವಾರ ಸುರಿದ ಭಾರಿ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ರಸ್ತೆಗಳು ಕೆರೆಗಳಾಗಿ ಮಾರ್ಪಟ್ಟಿವೆ.
ಬೆಳಿಗ್ಗೆಯಿಂದ ಒಂದು ನಿಮಿಷ ಬಿಡುವೂ ನೀಡದೇ ಧಾರಾಕಾರವಾಗಿ ಸುರಿದ ಮಳೆಗೆ ಪಟ್ಟಣದ ಮಣ್ಕುಳಿ, ಬಂದರ ರೋಡ್, ಹೊನ್ನಿಗದ್ದೆ, ಚೌಥನಿ, ಮುಂಡಳ್ಳಿ ಸೇರಿದಂತೆ ತಾಲ್ಲೂಕಿನ ಹಲವು ಕಡೆ ಮನೆಗಳಿಗೆ ನೀರು ನುಗ್ಗಿ ಭಾರಿ ಹಾನಿ ಸಂಭವಿಸಿದೆ.
ಪಟ್ಟಣದ ಮುಖ್ಯ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳು ಕೆರೆಯಾಗಿ ಮಾರ್ಪಟ್ಟಿದ್ದವು. ರಂಗಿನ ಕಟ್ಟೆ ರಾಷ್ಟ್ರೀಯ ಹೆದ್ದಾರಿ ಹಾಗೂ ಸಂಶುದ್ದೀನ್ ವೃತ್ತದಲ್ಲಿ ಬಹಳ ನೀರು ತುಂಬಿದ ಪರಿಣಾಮವಾಗಿ ಹೆದ್ದಾರಿಯಲಿ ಸಂಚರಿಸುವ ವಾಹನ ಸವಾರರು ಪರದಾಡಬೇಕಾಯಿತು. ಮಧ್ಯಾಹ್ನದ ವೇಳೆಗೆ ರಂಗಿನಕಟ್ಟೆ ಹೆದ್ದಾರಿಯಲ್ಲಿ ಅಪಾರ ನೀರು ತುಂಬಿದ ಪರಿಣಾಮ ಕಿಲೋಮೀಟರ್ ತನಕ ವಾಹನ ದಟ್ಟಣೆ ಉಂಟಾಗಿ ಸವಾರರು ನಿಂತಲ್ಲೇ ನಿಲ್ಲಬೇಕಾಯಿತು. ರಸ್ತೆಯಲ್ಲಿ 3 ರಿಂದ 4 ಅಡಿಗಳಷ್ಟು ನೀರು ತುಂಬಿದ ಕಾರಣ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಸಾರ್ವಜನಿಕರು ನಡೆದುಹೋಗಲು ಪರದಾಡುವಂತಾಯಿತು. ಗ್ರಾಮೀಣ ಭಾಗದಲ್ಲಿಯೂ ನದಿಗಳು ಉಕ್ಕಿ ಹರಿದ ಪರಿಣಾಮ ಅಡಿಕೆ ತೋಟ ಹಾಗೂ ಭತ್ತ ನಾಟಿ ಮಾಡಿದ ಕೃಷಿ ಭೂಮಿಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.
ತಾಲ್ಲೂಕಿನ ಪ್ರಮುಖ ನದಿಗಳು ಆಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ನದಿಯಂಚಿನ ವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಚೌಥನಿ ಭಾಗದಲ್ಲಿ ಕಾಳಜಿ ಕೇಂದ್ರ ತೆರೆಯಲು ಸೂಚಿಸಲಾಗಿದೆ. ಮೂಡಭಟ್ಕಳದಲ್ಲಿ ನದಿಯ ನೀರು ಉಕ್ಕಿ ರಸ್ತೆಯ ಮೇಲೆ ಹರಿಯುತ್ತಿದ್ದು, ರಸ್ತೆಯಲ್ಲಿ ಓಡಾಡುತ್ತದ್ದ ಜಾನುವಾರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಿಗಳಿಗೆ ಬಿಡಲಾಗಿದೆ. ಬುಧವಾರ ರಾತ್ರಿ ಸಿಡಿಲಿಗೆ ಬೆಳ್ಕೆ ಕಟಗೇರಿ ನಿವಾಸಿ ವೆಂಕಟೇಶ ಪೂಜಾರಿ ಅವರ ದನದ ಕೊಟ್ಟಿಗೆಗೆ ಬೆಂಕಿ ತಗುಲಿ ಕೊಟ್ಟಿಗೆ ಸಂಪೂರ್ಣ ಸುಟ್ಟು ಕರಲಾಗಿದೆ. ಕೊಟ್ಟಿಗೆಯಲ್ಲಿದ್ದ ಹುಲ್ಲಿನ ರಾಶಿಗೆ ಬೆಂಕಿ ತಗುಲಿ ಅನಾಹುತ ಸಂಭವಿಸಿದೆ. ಕೊಟ್ಟಿಗೆಯಲ್ಲಿದ್ದ ಜಾನುವಾರನ್ನು ರಕ್ಷಿಸಲಾಗಿದೆ.
ತಾಲ್ಲೂಕಿನಲ್ಲಿ ಗುರುವಾರ ಸುರಿದ ಭಾರಿ ಮಳೆಗೆ ಹಲವು ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ. ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಲ್ಲೂಕಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕು ಆಡಳಿತದಿಂದ ಮಳೆ ನೀರು ನುಗ್ಗುವ ಕಡೆ ಕಾಳಜಿ ಕೇಂದ್ರ ತೆರೆದು ಸನ್ನದ್ಧ ಸ್ಥಿತಿಯಲ್ಲಿ ಇರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.