ಶಿರಸಿ: ಜಾತಿ, ಮತದ ಗೆರೆ ಮೀರಿ ನಿಂತಿರುವ ಇಲ್ಲಿನ ನಿತ್ಯಾನಂದ ಮಠದಲ್ಲಿ ಏ.12ರಿಂದ 14ರವರೆಗೆ ರಾಮನವಮಿ ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿಷ್ಣು ಹರಿಕಾಂತ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮಗಳ ಮಾಹಿತಿ ನೀಡಿ, ‘ಬ್ರಹ್ಮ ಚೈತನ್ಯ ಅವಧೂತ ಸದ್ಗುರು ನಿತ್ಯಾನಂದ ಸ್ವಾಮೀಜಿ ಶಿಷ್ಯ ಮಹಾಬಲಾನಂದ ಸ್ವಾಮೀಜಿಯವರು ನಿತ್ಯಾನಂದ ಮಠದಲ್ಲಿ ಪ್ರತಿಷ್ಠಾಪಿಸಿರುವ ರಾಮಾಂಜನೇಯ ದೇವಸ್ಥಾನದಲ್ಲಿ ರಾಮನವಮಿ ಉತ್ಸವ ನಡೆಯಲಿದೆ’ ಎಂದರು.
‘12ರಂದು ಅಖಂಡ ಶ್ರೀರಾಮ ತಾರಕ ಜಪ, 13ರಂದು ಸದ್ಗುರು ನಿತ್ಯಾನಂದ ಸ್ವಾಮೀಜಿ, ಸದ್ಗುರು ಮಹಾಬಲಾನಂದ ಸ್ವಾಮೀಜಿ, ರಾಮಾಂಜನೇಯಸೀತಾ, ಲಕ್ಷ್ಮಣ, ಉಮಾಮಹೇಶ್ವರ, ಮಹಾಗಣಪತಿ, ಶನೈಶ್ಚರ ದೇವರಿಗೆ ಅಭಿಷೇಕ, ಸೀತಾ ಮತ್ತು ಉಮಾಮಹೇಶ್ವರಿಗೆ ಉಡಿ ಸೇವೆ ನಡೆಯಲಿದೆ. ಬೆಳಿಗ್ಗೆ 11.30ರಿಂದ ಮಠದ ಆವರಣದಲ್ಲಿ ಪಲ್ಲಕ್ಕಿ ಮೆರವಣಿಗೆ, ಮಧ್ಯಾಹ್ನ 3.30ರಿಂದ ಶಿರಸಿ ನಗರದಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ರಾತ್ರಿ 8ಕ್ಕೆ ಮಹಾ ಮಂಗಳಾರತಿ, ಅನ್ನಪ್ರಸಾದ ಸಂತರ್ಪಣೆ ನಡೆಯಲಿದೆ’ ಎಂದು ತಿಳಿಸಿದರು.
14ರ ಬೆಳಿಗ್ಗೆ 6ಕ್ಕೆ ಮಹಾಭಿಷೇಕ, ಸಂಜೆ 5.30ಕ್ಕೆ ರಥಾರೋಹಣ, ರಥಾನಯನ, ರಥಾವರೋಹಣ, ವಸಂತೋತ್ಸವ, ಅಷ್ಟಾವಧಾನ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಡೆಯಲಿದೆ. ನಂತರ ಕೊಳಗಿಬೀಸ್ನ ಕುಮಾರ ಭಟ್ಟ ಅವರಿಂದ ಯುಗಪುರುಷ ಶ್ರೀರಾಮನ ಕುರಿತು ಪ್ರವಚನ ನಡೆಯಲಿದೆ ಎಂದರು. ರಾಮಕೃಷ್ಣ ಬಿಳಗಿಕರ್, ಸುರೇಶ ತಾಂಡೇಲ, ಪ್ರಧಾನ ಅರ್ಚಕ ಗುರುಪಾದ ಭಟ್ಟ, ಲಿಂಗಪ್ಪ ಕೊಂಡ್ಲಿ, ಮಂಜುನಾಥ ನಾಯ್ಕ ಇದ್ದರು.
ಸುಪ್ರಭಾತ ಭಜನಾ ಕಾರ್ಯಕ್ರಮ
ಭಟ್ಕಳ: ರಾಮನವಮಿ ಪ್ರಯುಕ್ತ ಇಲ್ಲಿನ ಕರಿಕಲ್ ಕಿನಾರೆ ತಟದಲ್ಲಿರುವ ಶ್ರೀರಾಮ ಧ್ಯಾನ ಕುಟೀರದಲ್ಲಿ ಏಪ್ರಿಲ್ 13 ರಂದು ಬೆಳಿಗ್ಗೆ 5 ಗಂಟೆಯಿಂದ 6 ರವರೆಗೆ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆ ಭಟ್ಕಳ ಇವರಿಂದ ಓಂಕಾರ ಸುಪ್ರಭಾತ ಭಜನಾ ಕಾರ್ಯಕ್ರಮ ನಡೆಯಲಿದೆ. ರಾಮ ಭಕ್ತರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ವಿನಂತಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.