ADVERTISEMENT

‘ಕೊನೆಯ ಉಸಿರು ಇಲ್ಲೇ ಎಂದಿದ್ದರು...’

ಜೊಯಿಡಾದೊಂದಿಗೆ ಅವಿನಾಭಾವ ನಂಟು ಹೊಂದಿದ್ದ ರವಿ ಬೆಳಗೆರೆ

ಸದಾಶಿವ ಎಂ.ಎಸ್‌.
Published 13 ನವೆಂಬರ್ 2020, 11:30 IST
Last Updated 13 ನವೆಂಬರ್ 2020, 11:30 IST
   

ಕಾರವಾರ: ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರಿಗೆ ಜೊಯಿಡಾ ಎಂದರೆ ಬಹಳ ಅಚ್ಚುಮೆಚ್ಚಾಗಿತ್ತು. ಇದೇ ಕಾರಣಕ್ಕೆ ತಾಲ್ಲೂಕಿನ ಜಗಲ್‌ಪೇಟದಲ್ಲಿ ಮನೆಯಿರುವ ಒಂದು ಜಮೀನನ್ನು ಅವರು ಖರೀದಿಸಿದ್ದರು.

‘ಜೊಯಿಡಾಕ್ಕೆ ಅವರು 13 ವರ್ಷಗಳಿಂದ ಭೇಟಿ ನೀಡುತ್ತಿದ್ದರು. ಇಂಗ್ಲಿಷ್‌ನ ಪ್ರಸಿದ್ಧ ಬರಹಗಾರ ಮನೋಹರ ಮಾಳಗಾಂವ್ಕರ್ ಅವರ ಆರು ಎಕರೆ ಜಮೀನನ್ನು ₹ 4.50 ಕೋಟಿಗೆ ನಾಲ್ಕು ವರ್ಷಗಳ ಹಿಂದೆ ಖರೀದಿಸಿದ್ದರು. ಬೆಂಗಳೂರಿನಲ್ಲಿ ಎಲ್ಲರ ಜೊತೆ ನಾನೂ ಒಬ್ಬನಾಗಿ ಸಾಯುವ ಬದಲು, ನನ್ನ ಕೊನೆಯ ಕ್ಷಣಗಳನ್ನು ಇಲ್ಲೇ ಕಳೆಯಬೇಕು ಎಂದು ಬಹಳ ಸಲ ಹೇಳಿಕೊಂಡಿದ್ದರು’ ಎಂದು ಅವರ ಒಡನಾಡಿಯೂ ಆಗಿರುವ, ‘ಕಾಡುಮನೆ’ ಹೋಮ್ ಸ್ಟೇ ಮಾಲೀಕ ನರಸಿಂಹ ಭಟ್ ಛಾಪಖಂಡ ನೆನಪಿಸಿಕೊಳ್ಳುತ್ತಾರೆ.

ಜೊಯಿಡಾ ತಾಲ್ಲೂಕಿನ ಜಗಲ್‌ಪೇಟದಲ್ಲಿರುವ ಫಾರ್ಮ್‌ ಹೌಸ್‌ ಸಿಬ್ಬಂದಿ ಮತ್ತು ಅಭಿಮಾನಿಗಳು ರವಿ ಬೆಳಗೆರೆ ಅವರ ಭಾವಚಿತ್ರಕ್ಕೆ ದೀಪ ಬೆಳಗಿ ಶ್ರದ್ಧಾಂಜಲಿ ಕೋರಿದರು. ಇಂಗ್ಲಿಷ್ ಬರಹಗಾರ ಮನೋಹರ ಮಾಳಗಾಂವ್ಕರ್ ಅವರ ಭಾವಚಿತ್ರ ಹಿನ್ನೆಲೆಯಲ್ಲಿದೆ.

‘ಪ್ರಸಿದ್ಧ ಬರಹಗಾರರು ಇದ್ದ ಜಾಗ ಎನ್ನುವುದು ರವಿ ಅವರಿಗೆ ವಿಶೇಷ ಸ್ಫೂರ್ತಿ ನೀಡಿತ್ತು. ಹಾಗಾಗಿ ಇಲ್ಲಿದ್ದುಕೊಂಡು ಕೆಲವು ಪುಸ್ತಕಗಳನ್ನೂ ಬರೆದಿದ್ದರು. ಈ ಹಿಂದೆ ಅವರು ತಿಂಗಳಿಗೆ ಮೂರು, ನಾಲ್ಕು ಬಾರಿಯಾದರೂ ಬರುತ್ತಿದ್ದರು. ಕೆಲವೊಮ್ಮೆ ವಾರದಲ್ಲಿ ಎರಡು ಬಾರಿ ಬಂದಿದ್ದೂ ಇದೆ. ಕೋವಿಡ್ ಸೋಂಕು ಹರಡಿದ ನಂತರ ಬಂದಿರಲಿಲ್ಲ. ಎರಡು, ಮೂರು ತಿಂಗಳು ಇಬ್ಬರು ಪ್ರಸಿದ್ಧ ಬರಹಗಾರರ ಜೊತೆಗಿದ್ದ ಭಾಗ್ಯ ನನ್ನದಾಗಿತ್ತು’ ಎಂದು ಅವರು ಹೇಳುತ್ತಾರೆ.

ADVERTISEMENT

ರವಿ ಬೆಳಗೆರೆ ಅವರ ನಿಧನದ ಸುದ್ದಿ ತಿಳಿದು ಫಾರ್ಮ್ ಹೌಸ್‌ನಲ್ಲಿ ನೀರವ ಮೌನ ಆವರಿಸಿತು. ಅದನ್ನು ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿ ಹಾಗೂ ಅಭಿಮಾನಿಗಳು ಭಾವಚಿತ್ರವನ್ನಿಟ್ಟು, ಹೂವಿನ ಹಾರ ಹಾಕಿ, ದೀಪ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.