ADVERTISEMENT

ಸರಳ ಗಣೇಶೋತ್ಸವ ಆಚರಣೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 15:07 IST
Last Updated 11 ಆಗಸ್ಟ್ 2020, 15:07 IST

ಶಿರಸಿ: ಕೋವಿಡ್ 19 ಸಾಂಕ್ರಾಮಿಕ ಕಾಯಿಲೆ ಇರುವ ಕಾರಣಕ್ಕೆ ಈ ಬಾರಿ ಸಾರ್ವಜನಿಕ ಗಣೇಶೋತ್ಸವವನ್ನು ಒಂದು ದಿನಕ್ಕೆ ಸೀಮಿತವಾಗಿ, ಸರಳವಾಗಿ ಆಚರಿಸಲು ಮಂಗಳವಾರ ಇಲ್ಲಿ ನಡೆದ ಗಣೇಶೋತ್ಸವ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಪ್ರಮುಖರು ಭಾಗವಹಿಸಿದ್ದರು.

‘ತಾಲ್ಲೂಕಿನಲ್ಲಿ ಕೋವಿಡ್ ನಿಯಂತ್ರಿಸಲು ಈ ಬಾರಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡುವುದಿಲ್ಲ’ ಎಂದು ಗೋಪಾಲಕೃಷ್ಣ ನಾಯಕ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಸದಸ್ಯರಾದ ಗಣಪತಿ ನಾಯ್ಕ, ಪ್ರದೀಪ ಶೆಟ್ಟಿ, ‘ಕೊರೊನಾ ನಡುವೆಯೇ ಹಬ್ಬ ಬಂದಿರುವುದರಿಂದ ಆತಂಕ ಸಹಜ. ಆದರೆ, ವಿನಾಯಕನ ಪೂಜೆಯಿಂದ ಜನರಲ್ಲಿ ಉಂಟಾಗಿರುವ ಆತಂಕ ದೂರವಾಗಬಹುದು. ಸರಳ ಆಚರಣೆಗೆ ಅವಕಾಶ ನೀಡಬೇಕು’ ಎಂದರು.

ADVERTISEMENT

‘ಹಬ್ಬದ ಆಚರಣೆಯನ್ನು ಗಣೇಶೋತ್ಸವ ಸಮಿತಿಯವರೇ ಸೇರಿ, ಯಾವುದೇ ಆಡಂಬರವಿಲ್ಲದೆ ಮಾಡುತ್ತೇವೆ. ಚಂದಾ ಸಂಗ್ರಹವನ್ನೂ ಮಾಡುವುದಿಲ್ಲ. ದುಂದು ವೆಚ್ಚ ಇರುವುದಿಲ್ಲ’ ಎಂದು ನಂದನ ಸಾಗರ ಹೇಳಿದರು. ಇದಕ್ಕೆ ಡಿವೈಎಸ್ಪಿ ಒಪ್ಪಿದರು. ಸಿಪಿಐ ಪ್ರದೀಪ ಬಿ.ಯು, ಪಿಎಸ್‌ಐಗಳಾದ ನಾಗಪ್ಪ ಬಿ, ಶಿವಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.