ADVERTISEMENT

ದಾಂಡೇಲಿ | ಹದಗೆಟ್ಟ ರಸ್ತೆ: ನಿವಾಸಿಗಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಜನವರಿ 2024, 14:22 IST
Last Updated 9 ಜನವರಿ 2024, 14:22 IST
ದಾಂಡೇಲಿ ಪಟೇಲ್ ವೃತ್ತದಲ್ಲಿ ಹಳೇ ದಾಂಡೇಲಿ ನಿವಾಸಿಗಳು ಹದಗೆಟ್ಟ ರಸ್ತೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು
ದಾಂಡೇಲಿ ಪಟೇಲ್ ವೃತ್ತದಲ್ಲಿ ಹಳೇ ದಾಂಡೇಲಿ ನಿವಾಸಿಗಳು ಹದಗೆಟ್ಟ ರಸ್ತೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು   

ದಾಂಡೇಲಿ: ಹಳಿಯಾಳ ತಾಲ್ಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗೆಂದು ಹಳೇ ದಾಂಡೇಲಿ ಮುಖ್ಯ ರಸ್ತೆಯಲ್ಲಿ ನೀರಿನ ಪೈಪ್‌ಲೈನ್‌ ಹಾಗೂ ಯುಜಿಡಿ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ರಸ್ತೆ ಅಗೆದ ಪರಿಣಾಮ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇದರಿಂದ ಬೇಸತ್ತ ಇಲ್ಲಿನ ನಿವಾಸಿಗಳು ಮಂಗಳವಾರ ನಗರದ ಪಟೇಲ ವೃತ್ತದಲ್ಲಿ ಮೂರು ತಾಸಿಗೂ ಹೆಚ್ಚು ಸಮಯ ರಸ್ತೆ ತಡೆದು ಪ್ರತಿಭಟಿಸಿದರು.

ಅನಂತರ ಸ್ಥಳಕ್ಕೆ ಆಗಮಿಸಿದ ಹಳಿಯಾಳದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಪ್ರತಿಭಟನಾ ನಿರಂತರೊಂದಿಗೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಕಾಲ್ನಡಿಗೆಯಲ್ಲಿ ತೆರಳುವಂತೆ ಒತ್ತಾಯಿಸಿ ಜೊತೆಗೆ ಕರೆದುಕೊಂಡು ಕಾಮಗಾರಿ ಅವಾಂತರ ತೋರಿಸಿದರು.

ಜನವರಿ ಅಂತ್ಯಕ್ಕೆ ಸಂಪೂರ್ಣ ಕಾಮಗಾರಿ ಹಾಗೂ ರಸ್ತೆ ದುರಸ್ತಿ ಕಾರ್ಯ ಮಾಡುವುದಾಗಿ ಲೋಕೋಪಯೋಗಿ ಇಲಾಖೆ ಅಭಿಯಂತರರಾದ ಸುಧಾರಕ ಕಟ್ಟಿಮನಿ ಭರವಸೆ ನೀಡಿ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದರು.

ADVERTISEMENT

ಕಳೆದ 2 ವರ್ಷಗಳಿಂದ ಈ ಕಾಮಗಾರಿ ನಡೆಯುತ್ತಿದ್ದು, ನವೆಂಬರ್ ಅಂತ್ಯದಲ್ಲಿ ಕೆಲಸ ಮುಗಿಸಿ ರಸ್ತೆ ಮಾಡಿಕೊಡುವುದಾಗಿ ಭರವಸೆ ನೀಡಿದ ಅಧಿಕಾರಿಗಳು ಜನವರಿ ಬಂದರೂ ರಸ್ತೆ ದುರಸ್ತಿ ಮಾಡದ ಕಾರಣ ಹಳೇ ದಾಂಡೇಲಿ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.

ಶುಕ್ರವಾರ ರಾತ್ರಿ ಕೈಗೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಹಾಗೂ ತಹಶೀಲ್ದಾರ್‌ ಶೈಲೇಶ ಪರಮಾನಂದ, ಸ್ಥಳೀಯರ ಸಮಸ್ಯೆ ಆಲಿಸಿ ಗ್ರಾಮೀಣ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕರ ಅಭಿಯಂತರ ಅವರಿಗೆ ದೂರವಾಣಿ ಕರೆ ಮಾಡಿ ಸೋಮವಾರದಿಂದ ರಸ್ತೆ ದುರಸ್ತಿ ಮಾಡುವ ಕಾಮಗಾರಿ ಪ್ರಾರಂಭಿಸಬೇಕೆಂದು ಸೂಚಿಸಿದ್ದರು. ಆದರೆ, ಮಂಗಳವಾರ ಕಳೆದರೂ ರಸ್ತೆ ದುರಸ್ತಿ ಮಾಡದ ಕಾರಣ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ನಿವಾಸಿಗಳಾದ ಆರೀಫ್ ಖಾಜಿ, ಅನ್ವರ ಪಟಾನ, ವಿಷ್ಣು ಕಾಮತ್,ವಿನೋದ್ ಬಾಂದೇಕರ, ರಾಜೇಂದ್ರ ಕೊಡ್ಕಣಿ, ಇಲಿಯಾಸ್ ಅಹ್ಮದ್, ಅಫ್ತಾಬ್ ಖಾಜಿ ಇಮ್ತಿಯಾಜ್ ಸೈಯದ್, ತೌಫಿಕ್ ಸೈಯದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.