ಕಾರವಾರ: ‘ಸರ್ಕಾರ ರೂಪಿಸಿರುವ ಆರ್ಥಿಕ ಯೋಜನೆಗಳು ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆಗೆ, ಸಂಕಷ್ಟ ಕಾಲದಲ್ಲಿ ನೆರವಿಗೆ ಅನುಕೂಲವಾಗಿವೆ. ಅವುಗಳ ಸದುಪಯೋಗ ಪಡೆದುಕೊಳ್ಳಲು ಜನರು ಯೋಜನೆಗಳ ಅರಿವು ಹೊಂದಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಸಾಸಿ ಹೇಳಿದರು.
ತಾಲ್ಲೂಕಿನ ಅಸ್ನೋಟಿಯ ಶಿವಾಜಿ ವಿದ್ಯಾಮಂದಿರದ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆರ್ಥಿಕ ಸೇರ್ಪಡೆ ಯೋಜನೆಗಳ ಪೂರ್ಣಗೊಳಿಸುವಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು.
‘ಬ್ಯಾಂಕ್ಗಳ ಮೂಲಕ ವಹಿವಾಟು ನಡೆಸುವುದನ್ನು ರೂಢಿಸಿಕೊಳ್ಳಬೇಕು. ಬ್ಯಾಂಕ್ಗಳು ಜನಸ್ನೇಹಿ ನೀತಿಗಳನ್ನು ಹೆಚ್ಚು ರೂಪಿಸಿಕೊಳ್ಳಬೇಕು. ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು’ ಎಂದರು.
ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಜಿಲ್ಲಾ ವ್ಯವಸ್ಥಾಪಕ ಪ್ರದೀಪ ಥಾಮಸ್ ಬ್ಯಾಂಕ್ನಲ್ಲಿ ಸಿಗುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಜಪ್ಪ ಗೌಳಿ, ‘ವಾರ್ಷಿಕ ಕೇವಲ ₹20 ಪಾವತಿಸಿ ಪ್ರಧಾನ ಮಂತ್ರಿ ಸುರಕ್ಷೆ ವಿಮೆ ಯೋಜನೆ, ₹436ಕ್ಕೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮೆ ಯೋಜನೆ ಪಡೆಯಲು ಅವಕಾಶವಿದೆ. ಅಟಲ್ ಪಿಂಚಣಿ ಯೋಜನೆ ಮಾಡಿಸಿಕೊಳ್ಳಬಹುದು’ ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿದ್ಯೇಶ್ವರಿ ನಾಯ್ಕ, ಗಿರೀಶ ದೇಸಾಯಿ, ಇತರರು ಪಾಲ್ಗೊಂಡಿದ್ದರು. ಶಿವಾಜಿ ವಿದ್ಯಾಮಂದಿರದ ಮುಖ್ಯ ಶಿಕ್ಷಕ ಗಣೇಶ ಬಿಷ್ಟಣ್ಣನವರ ನಿರೂಪಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.