ADVERTISEMENT

ಶಿರಸಿ: ಕೋವಿಡ್ ಲಸಿಕೆಗೆ ನೂಕುನುಗ್ಗಲು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 14:47 IST
Last Updated 2 ಆಗಸ್ಟ್ 2021, 14:47 IST
ಶಿರಸಿಯ ವಿದ್ಯಾಧಿರಾಜ ಕಲಾಕ್ಷೇತ್ರದ ಎದುರು ಸೋಮವಾರ ಕೋವಿಡ್ ಲಸಿಕೆ ಪಡೆಯಲು ನಿಂತಿದ್ದ ಜನರು
ಶಿರಸಿಯ ವಿದ್ಯಾಧಿರಾಜ ಕಲಾಕ್ಷೇತ್ರದ ಎದುರು ಸೋಮವಾರ ಕೋವಿಡ್ ಲಸಿಕೆ ಪಡೆಯಲು ನಿಂತಿದ್ದ ಜನರು   

ಶಿರಸಿ: ನಗರದ ಅಂಬೇಡ್ಕರ್ ಭವನ ಮತ್ತು ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ತೆರೆಯಲ್ಪಟ್ಟಿದ್ದ ಕೋವಿಡ್ ಲಸಿಕೆ ಕೇಂದ್ರದಲ್ಲಿ ಸೋಮವಾರ ನೂಕುನುಗ್ಗಲು ಉಂಟಾಯಿತು. ಲಸಿಕೆ ಪಡೆಯಲು ಜನರು ಪೈಪೋಟಿಗೆ ಬಿದ್ದರು.

ಅಂಬೇಡ್ಕರ್‌ ಭವನದಲ್ಲಿ 400 ಡೋಸ್ ಲಸಿಕೆ ಪೂರೈಕೆ ಗುರಿ ಇತ್ತು. ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ನಗರದ ವಾರ್ಡ್ ನಂ.11, 12, 13 ಮತ್ತು 24ರ ವ್ಯಾಪ್ತಿಯ ಜನರಿಗೆ ಒಟ್ಟೂ 400 ಡೋಸ್ ಲಸಿಕೆ ಲಭ್ಯತೆ ಇತ್ತು. ಎರಡೂ ಕಡೆಗಳಲ್ಲಿ ನಸುಕಿನ ಜಾವದಿಂದಲೆ ಜನರು ಸಾಲುಗಟ್ಟಿ ನಿಂತಿದ್ದರು.

ಸೀಮಿತ ಪ್ರಮಾಣದ ಲಸಿಕೆಗೆ ನೂರಾರು ಜನ ಸೇರಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಲಸಿಕೆಗೆ ಮುಂಚಿತವಾಗಿಯೇ ಟೋಕನ್ ನೀಡಲಾಗಿತ್ತು ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಯಿತು.

ADVERTISEMENT

‘ಆಯಾ ವಾರ್ಡುಗಳ ಸದಸ್ಯರು ಮೊದಲೇ ಟೋಕನ್ ಪಡೆದುಕೊಂಡಿದ್ದಾರೆ. ಅವರಿಗೆ ಬೇಕಾದವರಿಗೆ ಹಂಚಿಕೆ ಮಾಡಿದ್ದಾರೆ. ಆರೋಗ್ಯ ಇಲಾಖೆಯೂ ಶಾಮೀಲಾಗಿದೆ’ ಎಂದು ಲಸಿಕೆ ಪಡೆಯಲು ಬಂದಿದ್ದ ಪ್ರಕಾಶ್, ಸ್ಟಿಫನ್ ಇತರರು ಆರೋಪಿಸಿದರು.

ಗ್ರಾಮೀಣ ಭಾಗದ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ವಿತರಣೆಗೆ ಗದ್ದಲಗಳು ನಡೆದಿದ್ದವು. ಸೀಮಿತ ಸಂಖ್ಯೆಯ ಲಸಿಕೆ ಇದ್ದು, ಅದನ್ನು ಪಡೆಯಲು ಬರುವವರ ಸಂಖ್ಯೆ ಮೂರ್ನಾಲ್ಕು ಪಟ್ಟು ಹೆಚ್ಚಳವಾಗಿತ್ತು.

‘ಮೂರೂವರೆ ಸಾವಿರ ಡೋಸ್ ಲಸಿಕೆ ಮಾತ್ರ ದಿನವೊಂದಕ್ಕೆ ಪೂರೈಕೆಯಾಗಿದೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೇಂದ್ರಕ್ಕೆ ಬಂದಿದ್ದರಿಂದ ಸಮಸ್ಯೆ ಉಂಟಾಯಿತು. ಲಸಿಕೆ ಪೂರೈಕೆ ಪ್ರಮಾಣ ಹೆಚ್ಚಳವಾದರೆ ಗೊಂದಲವಿಲ್ಲದೆ ವಿತರಿಸಬಹುದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್ಟ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.