ADVERTISEMENT

ಪಡಿತರ ಚೀಟಿಗಾಗಿ ಮುಗಿಬಿದ್ದ ಜನ

ಲಾಕ್‍ಡೌನ್ ಜಾರಿಯಾಗುವ ಆತಂಕ: ಸೌಲಭ್ಯ ಪಡೆಯಲು ತರಾತುರಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 16:33 IST
Last Updated 12 ಆಗಸ್ಟ್ 2021, 16:33 IST
ಶಿರಸಿಯ ಮಿನಿ ವಿಧಾನಸೌಧದಲ್ಲಿ ಪಡಿತರ ಚೀಟಿ ಪಡೆಯಲು ಜನರು ಸರತಿಯಲ್ಲಿ ನಿಂತಿರುವುದು
ಶಿರಸಿಯ ಮಿನಿ ವಿಧಾನಸೌಧದಲ್ಲಿ ಪಡಿತರ ಚೀಟಿ ಪಡೆಯಲು ಜನರು ಸರತಿಯಲ್ಲಿ ನಿಂತಿರುವುದು   

ಶಿರಸಿ: ಪಡಿತರ ಚೀಟಿಗಳಿಗೆ ಇ–ಕೆವೈಸಿ ಮಾಡಿಸಿಕೊಂಡ ಗ್ರಾಹಕರಿಗೆ ಹೊಸ ಕಾರ್ಡ್‌ಗಳನ್ನು ನೀಡಲಾಗುತ್ತಿದ್ದು, ಮತ್ತೆ ಲಾಕ್‍ಡೌನ್ ಜಾರಿಯಾಗಬಹುದೆಂಬ ಆತಂಕದಿಂದ ಜನರು ಕಾರ್ಡ್‌ಗಳನ್ನು ಪಡೆಯಲು ಮಿನಿ ವಿಧಾನಸೌಧದಲ್ಲಿರುವ ಆಹಾರ ಇಲಾಖೆ ಕಚೇರಿಗೆ ಮುಗಿಬೀಳುತ್ತಿದ್ದಾರೆ.

ತಾಲ್ಲೂಕಿನಲ್ಲಿ 47 ಸಾವಿರದಷ್ಟು ಪಡಿತರ ಕಾರ್ಡ್‌ಗಳಿವೆ. ಈ ಪೈಕಿ ಇ–ಕೆವೈಸಿ ಪ್ರಕ್ರಿಯೆ ಈಗಾಗಲೆ ಶೇ.60ರಷ್ಟು ಪೂರ್ಣಗೊಂಡಿದೆ. ಎರಡು, ಮೂರು ತಿಂಗಳ ಹಿಂದೆ ಇ–ಕೆವೈಸಿ ಮಾಡಿಸಿಕೊಂಡಿದ್ದವರಿಗೆ ಹೊಸದಾಗಿ ಪಡಿತರ ಚೀಟಿ ಹಂಚಿಕೆ ಮಾಡಲಾಗುತ್ತಿದ್ದು, ಇದನ್ನು ಪಡೆಯುವ ಆತುರದಲ್ಲಿ ಜನರಿದ್ದಾರೆ.

ಮಿನಿ ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿಯ ಎದುರು ದಿನವೂ ಜನರ ಉದ್ದದ ಸಾಲು ಕಾಣಸಿಗುತ್ತಿದೆ.

ADVERTISEMENT

‘ಕಳೆದ ಏಪ್ರಿಲ್‍ನಲ್ಲಿ ಲಾಕ್‍ಡೌನ್ ಜಾರಿಗೆ ಮುನ್ನ ಇ–ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿತ್ತು. ಹೊಸ ಕಾರ್ಡ್‌ ಸಿಗಬಹುದೆಂಬ ರೀಕ್ಷೆಯಲ್ಲೇ ಮೂರು ತಿಂಗಳು ಮುಗಿದಿದೆ. ಮತ್ತೆ ಲಾಕ್‍ಡೌನ್ ಜಾರಿಯಾಗಬಹುದು ಎಂಬ ಆತಂಕವಿರುವ ಕಾರಣ ಹೊಸ ಕಾರ್ಡು ಪಡೆಯಲು ಬಂದಿದ್ದೇನೆ’ ಎಂದು ಗ್ರಾಹಕ ಪರಮೇಶ್ವರ ಮಡಿವಾಳ ಹೇಳಿದರು.

‘ಒನ್ ನೇಶನ್–ಒನ್ ಕಾರ್ಡ್ ಅಡಿ ಹೊಸ ಕಾರ್ಡ್‌ಗಳನ್ನು ಹಂಚಿಕೆ ಮಾಡಲಾಗುತ್ತಿದ್ದು, ಇ–ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡವರಿಗಷ್ಟೆ ಇದು ಲಭಿಸುತ್ತಿದೆ. ಕಾರ್ಡ್‌ಗಳನ್ನು ಪಡೆಯಲು ಜನರು ಗುಂಪಾಗಿ ಬರುವ ಅಗತ್ಯವಿಲ್ಲ. ಈ ಬಗ್ಗೆ ಸೂಚನೆ ನೀಡಿದ್ದರೂ ಪಾಲಿಸುತ್ತಿಲ್ಲ’ ಎಂದು ಆಹಾರ ಇಲಾಖೆಯ ಶಿರಸ್ತೇದಾರ್ ನಾಗರಾಜ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.