ADVERTISEMENT

ಕೈಗಾ: ‘ಕೇಂದ್ರ ವನ್ಯಜೀವಿ ಮಂಡಳಿಯಿಂದ ಅನುಮತಿ ಸಿಕ್ಕಿದೆಯೇ?’

ಕೈಗಾ 5, 6ನೇ ಘಟಕಗಳ ಸ್ಥಾಪನೆ ಬಗ್ಗೆ ಸ್ಪಷ್ಟನೆ ಅಗತ್ಯ: ಸತೀಶ ಸೈಲ್

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 13:28 IST
Last Updated 10 ಸೆಪ್ಟೆಂಬರ್ 2019, 13:28 IST
ಸತೀಶ ಸೈಲ್
ಸತೀಶ ಸೈಲ್   

ಕಾರವಾರ: ಕೈಗಾ ಅಣುವಿದ್ಯುತ್ ಸ್ಥಾವರದಐದು ಮತ್ತು ಆರನೇ ಘಟಕಗಳ ಸ್ಥಾಪನೆಗೆಕೇಂದ್ರ ವನ್ಯಜೀವಿ ಮಂಡಳಿಯಿಂದ ಅನುಮತಿಸಿಕ್ಕಿದೆಯೇ? ಒಂದುವೇಳೆ ಒಪ್ಪಿಗೆ ಸಿಗದೇ ಸ್ಥಾವರದ ವಿಸ್ತರಣೆಗೆ ಮುಂದಾಗುವುದು ಆಕ್ಷೇಪಾರ್ಹ’ ಎಂದು ಕಾಂಗ್ರೆಸ್ ಮುಖಂಡ ಸತೀಶ ಸೈಲ್ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಳಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಕೋಥಿಗಾಂ ಸಂರಕ್ಷಿತ ಅರಣ್ಯ ಪ್ರದೇಶಗಳು ಕೈಗಾ ಅಣುವಿದ್ಯುತ್ ಸ್ಥಾವರದ ಸಮೀಪದಲ್ಲೇ ಇವೆ. ಹಾಗಾಗಿ ಇಲ್ಲಿ ಹೊಸ ಘಟಕಗಳ ಸ್ಥಾಪನೆಗೆ ಅನುಮತಿ ಪಡದಿರುವ ಬಗ್ಗೆ ಸ್ಪಷ್ಟನೆ ಬೇಕು’ ಎಂದು ಅವರು ಒತ್ತಾಯಿಸಿದರು.

‘ಕೈಗಾದ ನಾಲ್ಕು ಘಟಕಗಳಲ್ಲಿಸಾವಿರಾರು ಜನರು 15– 20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ ಗುತ್ತಿಗೆದಾರರು ಬದಲಾಗುತ್ತಾರೆ. ಆದರೆ,ಕಾರ್ಮಿಕರ ಸೇವೆ ಮಾತ್ರ ಕಾಯಂ ಆಗುತ್ತಿಲ್ಲ. ಹೊಸ ಘಟಕಗಳ ಸ್ಥಾಪನೆಯಾಗುವಾಗ ಹಳೆಯ ಕಾರ್ಮಿಕರಿಗೆ ಬಡ್ತಿ, ವೇತನ ಹೆಚ್ಚಳ ಮಾಡಬೇಕು. ಹೊಸ ಹುದ್ದೆಗಳಿಗೆ ಈಗಿನ ಕಾರ್ಮಿಕರು ವಯೋಮಿತಿಯ ಕಾರಣಗಳಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಇದನ್ನು ಸರಿಪಡಿಸಬೇಕು’ ಎಂದು ಅವರು ಹೇಳಿದರು.‌

ADVERTISEMENT

‘ಈಚೆಗೆ ಕಾಳಿ ನದಿಯಲ್ಲಿ ನೆರೆ ಬಂದ ಸಂದರ್ಭದಲ್ಲಿ ಗೊಟೆಗಾಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೂ ಹಾನಿಯಾಗಿತ್ತು. ಬಳಿಕ ಆ ನೀರನ್ನು ಪರೀಕ್ಷೆಗೆ ಒಳಪಡಿಸಿದಾಗ ಸೇವನೆಗೆ ಯೋಗ್ಯವಲ್ಲ ಎಂದು ಕಂಡುಬಂದಿದೆ. ಹಲವೆಡೆ ಮೀನುಗಳೂ ಸತ್ತಿವೆ. ಆರೋಗ್ಯದ ಮೇಲಿನ ಪರಿಣಾಮದ ಬಗ್ಗೆ ಜಿಲ್ಲಾಡಳಿತದಿಂದ ಸೂಕ್ತ ಮಾಹಿತಿ ಕೊಡಬೇಕು. ಈ ಬಗ್ಗೆ ಜನರಿಗೂ ಮಾರ್ಗದರ್ಶನ ನೀಡಬೇಕು’ ಎಂದರು.

‘ನಮ್ಮ ವಿರೋಧ ದಾಖಲಿಸಲಿಲ್ಲ’:‘ಡಿಸೆಂಬರ್‌ನಲ್ಲಿ ಮಲ್ಲಾಪುರದಲ್ಲಿ ಆಯೋಜಿಸಲಾಗಿದ್ದಸಾರ್ವಜನಿಕ ಆಲಿಕೆ ಸಭೆಗೆ ಹೋಗದೇ ಹೊರಗಿನಿಂದಲೇ ಪ್ರತಿಭಟನೆ ಮಾಡಿದ್ದಿರಿ’ ಎಂದು ಪತ್ರಕರ್ತರು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸತೀಶ ಸೈಲ್, ‘ನಮ್ಮನ್ನು ಆಹ್ವಾನಿಸಿದ್ದ ಸಂಘಟನೆಯವರು ಸಭೆಗೆ ಯಾರೂ ಹೋಗುವುದು ಬೇಡ, ಹೊರಗಿನಿಂದಲೇ ನಮ್ಮ ವಿರೋಧವ್ಯಕ್ತಪಡಿಸಬೇಕು ಎಂದಿದ್ದರು. ಅದರಂತೆ ನಾವು ಪ್ರತಿಭಟನೆ ನಡೆಸಿದ್ದೆವು. ಆದರೆ, ನಮ್ಮ ವಿರೋಧವನ್ನು ಜಿಲ್ಲಾಧಿಕಾರಿ ದಾಖಲಿಸಲಿಲ್ಲ’ ಎಂದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಮೀರ್ ನಾಯ್ಕ, ಮುಖಂಡರಾದ ಪ್ರಭಾರಕ ಮಾಳ್ಸೇಕರ್, ಸಂಜಯ ಸಾಳುಂಕೆ, ಮೋಹನ ನಾಯ್ಕ, ಚೇತನ ಹರಿಕಂತ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.