ಮುಂಡಗೋಡ: ‘ಸಂಸ್ಕಾರಯುತ ಜೀವನ ಮುಖ್ಯವಾಗಿದ್ದು, ಪ್ರತಿ ತಾಲ್ಲೂಕಿನಲ್ಲಿ ಸಮುದಾಯದ ಪಾಠಶಾಲೆಗಳನ್ನು ತೆರೆಯುವುದು ಅಗತ್ಯವಾಗಿದೆ. ಇದಕ್ಕಾಗಿ ಬಂಜಾರ ಗುರುಪೀಠವು ನೆರವು ನೀಡಲು ಸದಾ ಸಿದ್ಧವಿದೆ' ಎಂದು ಬಂಜಾರ ಗುರುಪೀಠದ ಕುಮಾರ ಮಹಾರಾಜ ಹೇಳಿದರು.
ಇಲ್ಲಿನ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಭಾನುವಾರ ನಡೆದ ಸಂತ ಸೇವಾಲಾರ 282ನೇ ಜಿಲ್ಲಾ ಮಟ್ಟದ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಗೋಹತ್ಯೆ ನಿಷೇಧ ಜಾರಿಯಾಗಬೇಕು. ಬಂಜಾರಾ ಸಮುದಾಯವು ಹಿಂದಿನಿಂದಲೂ ಗೋ ಪೂಜೆ ಮಾಡಿಕೊಂಡು ಬಂದಿದೆ. ಮನುಷ್ಯನಿಗೆ ಸಂಸ್ಕಾರ ಬಂದರೆ ಅವನು ತಾನಾಗಿಯೇ ವಿದ್ಯಾವಂತನಾಗಿ, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ಕ್ರಿಯಾಶೀಲನಾಗುತ್ತಾನೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ಸೇವಾಲಾಲ ಸಮಾಜದ ಋಣ ನನ್ನ ಮೇಲೆ ಬಹಳಷ್ಟಿದೆ. ಸಮುದಾಯದವರು ವಿಜೃಂಭಣೆಯಿಂದ ಮೆರವಣಿಗೆ ಮಾಡಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡುವುದು ಪ್ರತಿ ಪಾಲಕರ ಕರ್ತವ್ಯವಾಗಿದೆ. ಪ್ರತಿ ಮನೆಯಲ್ಲಿ ಸರಸ್ವತಿ ವಾಸವಾಗುವಂತೆ ಮಾಡಿದರೆ, ಲಕ್ಷ್ಮೀ ತಾನಾಗಿಯೇ ಬರುತ್ತಾಳೆ. ಹೆಣ್ಣುಮಕ್ಕಳು ಕಲಿತರೆ ಇಡಿ ಕುಟುಂಬ ವಿದ್ಯಾವಂತ ಆಗುತ್ತದೆ ಎಂದರು.
ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಮತ್ತು ಸಚಿವರನ್ನು ಸನ್ಮಾನಿಸಲಾಯಿತು.ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯರಾದ ರವಿಗೌಡ ಪಾಟೀಲ, ಎಲ್.ಟಿ.ಪಾಟೀಲ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನಾಗಭೂಷಣ ಹಾವಣಗಿ, ಪಟ್ಟಣ ಪಂಚಾಯಿತಿ ಸದಸ್ಯ ಶೇಖರ ಲಮಾಣಿ, ರಾಮಣ್ಣ ಲಮಾಣಿ, ಪ್ರದೀಪ ಚವ್ಹಾಣ, ಪ್ರಕಾಶ ಚಂದಾಪುರ, ಡಾ.ಮನೋಹರ ಲಮಾಣಿ, ನಾರಾಯಣ ಲಮಾಣಿ, ಸುನೀಲ ಲಮಾಣಿ, ಬಂಜಾರ ಸಮಾಜದ ಮುಖಂಡರು ಹಾಜರಿದ್ದರು. ವೀಣಾ ರಾಠೋಡ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಿ.ಟಿ.ಲಮಾಣಿ ಮತ್ತು ರಮೇಶ ಪವಾರ ನಿರ್ವಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.