ADVERTISEMENT

ಬಾಕಿ ಅನುದಾನ ಬಿಡುಗಡೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 11:04 IST
Last Updated 3 ಅಕ್ಟೋಬರ್ 2020, 11:04 IST
ಸಂಚಾರಿ ಆರೋಗ್ಯ ಘಟಕಗಳೊಂದಿಗೆ ‘ಸ್ಕೊಡ್‌ವೆಸ್’ ಸಂಸ್ಥೆಯ ಸಿಬ್ಬಂದಿ
ಸಂಚಾರಿ ಆರೋಗ್ಯ ಘಟಕಗಳೊಂದಿಗೆ ‘ಸ್ಕೊಡ್‌ವೆಸ್’ ಸಂಸ್ಥೆಯ ಸಿಬ್ಬಂದಿ   

ಕಾರವಾರ: ಜಿಲ್ಲೆಯ ಎಂಡೊಸಲ್ಫಾನ್ ಪೀಡಿತರ ಪುನರ್ವಸತಿ ಕಾರ್ಯದಲ್ಲಿ ತೊಡಗಿಕೊಂಡಿರುವ ಸಂಚಾರಿ ಆರೋಗ್ಯ ಘಟಕಗಳಿಗೆ ಏಳು ತಿಂಗಳಿನಿಂದ ಬಾಕಿಯಿರುವ ಸೇವಾ ವೆಚ್ಚವನ್ನು ಪಾವತಿಸಬೇಕು. ಘಟಕಗಳ ಸೇವೆಯನ್ನು ಮುಂದುವರಿಸುವ ಬಗ್ಗೆ ಇರುವ ಗೊಂದಲ ನಿವಾರಿಸಬೇಕು ಎಂದು ಶಿರಸಿಯ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ ಎಲ್.ನಾಯ್ಕ ಒತ್ತಾಯಿಸಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜಿಲ್ಲೆಯ ಆರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಎರಡೂವರೆ ವರ್ಷಗಳಿಂದ ನಾಲ್ಕು ಸಂಚಾರಿ ಆರೋಗ್ಯ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಈವರೆಗೆ 75 ಸಾವಿರ ಮಂದಿಗೆ ಆರೋಗ್ಯ ಸೇವೆ ನೀಡಲಾಗಿದೆ’ ಎಂದು ವಿವರಿಸಿದರು.

‘ಪ್ರತಿ ಘಟಕದಲ್ಲಿ ತಲಾ ಆರು ಸಿಬ್ಬಂದಿಯಿದ್ದಾರೆ. ಪ್ರತಿ ತಿಂಗಳು ಪಾವತಿಸಬೇಕಾದ ಆರೋಗ್ಯ ಅನುದಾನವನ್ನು ಏಳು ತಿಂಗಳಿನಿಂದ ಬಿಡುಗಡೆ ಮಾಡಿಲ್ಲ. ಇದರಿಂದ ಘಟಕಗಳ ನಿರ್ವಹಣೆಗೆ ತೊಂದರೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದು, ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ. ಅವರ ಮಾತಿಗೆ ಬೆಲೆ ನೀಡಿ, ಕೋವಿಡ್ ಸಂದರ್ಭದಲ್ಲಿ ಸೇವೆ ಮುಂದುವರಿಸುತ್ತೇವೆ. ಪ್ರತಿ ಬಾರಿ ಅನುದಾನ ನೀಡುವ ಸಂದರ್ಭದಲ್ಲಿ ಈ ರೀತಿ ಆಗುತ್ತಿದೆ. ಇದಕ್ಕೊಂದು ಕಾಯಂ ಪರಿಹಾರ ಬೇಕಿದೆ’ ಎಂದು ಒತ್ತಾಯಿಸಿದರು.

ADVERTISEMENT

ಎಂಡೊಸಲ್ಫಾನ್ ಸಂಚಾರಿ ಆರೋಗ್ಯ ಘಟಕಗಳ ವೈದ್ಯಕೀಯ ಸಿಬ್ಬಂದಿಯೂ ಹಾಜರಿದ್ದರು. ಜಿಲ್ಲಾ ಪಂಚಾಯ್ತಿ ಮುಖ್ಯ
ಕಾರ್ಯ ನಿರ್ವಹಣಾ ಅಧಿಕಾರಿ ಮೊಹಮ್ಮದ್ ರೋಶನ್ ಹಾಗೂ ಶಾಸಕಿ ರೂಪಾಲಿ ನಾಯ್ಕ ಅವರಿಗೂ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.