ADVERTISEMENT

ಕುಣಬಿಗರಿಗೆ ಭರವಸೆ ತುಂಬಿದ ಸೋದೆ ಶ್ರೀಗಳು

ನೆರೆಪೀಡಿತ ಪ್ರದೇಶಕ್ಕೆ ಭೇಟಿ, ಮನೆ ಒದಗಿಸುವ ಭರವಸೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 19:30 IST
Last Updated 15 ಸೆಪ್ಟೆಂಬರ್ 2019, 19:30 IST
ಸೋದೆ ಶ್ರೀಗಳು ಕುಂಬ್ರಿ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು
ಸೋದೆ ಶ್ರೀಗಳು ಕುಂಬ್ರಿ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು   

ಶಿರಸಿ: ಉಡುಪಿ ಅಷ್ಟ ಮಠಗಳಲ್ಲಿ ಒಂದಾಗಿರುವ ತಾಲ್ಲೂಕಿನ ಸೋದೆ ವಾದಿರಾಜ ಮಠದ ಯತಿ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರು ಮಠದ ವತಿಯಿಂದ ದತ್ತು ಪಡೆದಿರುವ ಮಂಚಿಕೇರಿ ಸೋಮನಳ್ಳಿ ಗ್ರಾಮದ ಕುಂಬ್ರಿ ಹಳ್ಳಿಗೆ ಶನಿವಾರ ಭೇಟಿ ನೀಡಿ, ಅಲ್ಲಿನ ನಿವಾಸಿಗಳ ಜೊತೆ ಚರ್ಚಿಸಿದರು.

ಚಾತುರ್ಮಾಸ್ಯ ವ್ರತಾಚರಣೆಯಲ್ಲಿದ್ದ ಶ್ರೀಗಳು, ವ್ರತ ಸಮಾಪ್ತಿಯಾದ ದಿನವೇ, ಈ ಭಾಗಕ್ಕೆ ಭೇಟಿಕೊಟ್ಟು, ಗ್ರಾಮಸ್ಥರ ಜೊತೆಗೆ ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲಿ ಸಾಗಿ, ಪರಿಸ್ಥಿತಿ ಅವಲೋಕಿಸಿದರು. ‘ಸಂಪೂರ್ಣ ಮನೆ ಕಳೆದುಕೊಂಡಿರುವ ಕುಣಬಿಗರ ಕುಟುಂಬಕ್ಕೆ ಈ ಹಿಂದೆ ನೀಡಿದ ಭರವಸೆಯಂತೆ ದೀಪಾವಳಿಯ ನಂತರ ಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಕಷ್ಟ ಬಂದಿದೆಯೆಂದು ಆತಂಕಕ್ಕೆ ಒಳಗಾಗಬಾರದು. ಕಷ್ಟದ ಹಿಂದೆ ಸುಖ ಇರುತ್ತದೆ. ಇವೆರಡನ್ನೂ ಸಮನಾಗಿ ಸ್ವೀಕರಿಸಬೇಕು’ ಎಂದು ಶ್ರೀಗಳು ಹೇಳಿದರು.

ಈಗಾಗಲೇ ಮಠದಿಂದ ಒದಗಿಸಿರುವ ಕುಡಿಯುವ ನೀರಿನ ಯೋಜನೆಯನ್ನು ಶ್ರೀಗಳು ವೀಕ್ಷಿಸಿದರು. ಮಠದ ವ್ಯವಸ್ಥಾಪಕ ಮಾಣಿಕ್ಯ ಉಪಾಧ್ಯಾಯ ಇದ್ದರು.

ADVERTISEMENT

ಕಳೆದ ತಿಂಗಳು ಸಂಭವಿಸಿದ ಬೇಡ್ತಿ ನದಿ ಪ್ರವಾಹದಿಂದ ಕುಂಬ್ರಿಯಲ್ಲಿರುವ ಸುಮಾರು ಒಂಬತ್ತು ಕುಟುಂಬದವರು ಮನೆ ಕಳೆದುಕೊಂಡು, ಸಾಮೂಹಿಕ ವಾಸ ಮಾಡುತ್ತಿದ್ದಾರೆ. ಆರ್ಥಿಕ ತೊಂದರೆಯಲ್ಲಿರುವ ಈ ಕುಟುಂಬಗಳಿಗೆ ನೆಲೆ ಕಲ್ಪಿಸುವ ಜತೆಗೆ, ಮೂಲ ಸೌಕರ್ಯ ನೀಡಲು ವಾದಿರಾಜ ಮಠವು ಈ ಗ್ರಾಮವನ್ನು ದತ್ತು ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.