ಶಿರಸಿ: ಶಂಕರಾಚಾರ್ಯರ ತತ್ವ ವಿಶ್ವವ್ಯಾಪಿ ಪ್ರಸಿದ್ಧಿ ಪಡೆದಿದ್ದು, ಅದನ್ನು ಪದವಿ ಹಂತದಲ್ಲಿ ಪಠ್ಯದಲ್ಲಿ ಅಳವಡಿಸಿದರೆ ವಿದ್ಯಾರ್ಥಿಗಳ ಜ್ಞಾನ ಶಕ್ತಿ ವೃದ್ಧಿಸಲು ಸಾಧ್ಯವಿದೆ ಎಂದು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಸ್ವರ್ಣವಲ್ಲಿ ಮಠದಲ್ಲಿ ಶುಕ್ರವಾರ ನಡೆದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ತತ್ವಶಾಸ್ತ್ರ ವಿಭಾಗವಿದೆ. ಅಲ್ಲಿ ಶಂಕರರ ತತ್ವಗಳ ಮೇಲಿನ ವಿಷಯ ಆಧರಿಸಿ ಆದ್ಯತೆ ನೀಡಲಾಗಿದೆ. ನಮ್ಮ ದೇಶದ ಎಲ್ಲ ವಿಶ್ವ ವಿದ್ಯಾಲಯಗಳಲ್ಲೂ ಶಂಕರರ ಪ್ರತಿಪಾದನೆಯ ತತ್ವಗಳ ಬಗ್ಗೆ ಅಧ್ಯಯನಕ್ಕೆ ಪ್ರಾತಿನಿಧ್ಯ ಸಿಗಬೇಕು’ ಎಂದರು.
ಸಾಧನಾಶಂಕರ ಪ್ರಶಸ್ತಿ ಸ್ವೀಕರಿಸಿದ ನಿವೃತ್ತ ಸಂಸ್ಕೃತ ಶಿಕ್ಷಕ ಶ್ರೀಪಾದ ಭಟ್ಟ ಕಡತೋಕಾ ಮಾತನಾಡಿ, ‘ಶಂಕರರ ತತ್ವಗಳನ್ನು ನಾವೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು. ಇನ್ನೋರ್ವ ಪ್ರಶಸ್ತಿ ಪುರಸ್ಕೃತ ಡಾ.ಲಕ್ಷ್ಮೀನಾರಾಯಣ ಭಟ್ಟ ಉಡುಪಿ ಮಾತನಾಡಿ, ‘ನಿಸ್ವಾರ್ಥವಾಗಿ ಮಾಡುವ ಸೇವೆ ಮನಸ್ಸಿಗೆ ಸಂತೃಪ್ತಿ ಕೊಡುತ್ತದೆ’ ಎಂದರು.
ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ ಸ್ವಾಗತಿಸಿದರು. ಶಂಕರ ಭಟ್ಟ ನಿರ್ವಹಿಸಿದರು.
ಶಂಕರ ಜಯಂತಿ ಹಿನ್ನಲೆಯಲ್ಲಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.