
ಹಳಿಯಾಳ: ಇಲ್ಲಿನ ಎಪಿಎಂಸಿ ಮೈದಾನದ ಬಳಿ ಭಾನುವಾರ ರಾತ್ರಿ ನಡೆದ ವೀರೋಚಿತ ಕುಸ್ತಿ ಕಾಳಗದಲ್ಲಿ ಮಹಾರಾಷ್ಟ್ರ ಕೇಸರಿ ವಿಜೇತ ಸಿಕಂದರ ಶೇಖ್ ಮತ್ತು ಪೃಥ್ಥಿರಾಜ ಪಾಟೀಲ ಸೆಣಸಾಡಿದರು. ಜಯಶಾಲಿಯಾದ ಸಿಕಂದರ ಶೇಖ್ ಮಹೇಂದ್ರಾ ಥಾರ್ ರಾಕ್ಸ್ ವಾಹನ ತಮ್ಮದಾಗಿಸಿಕೊಂಡರು.
ಜನಸ್ನೇಹಿ ರಾಜು ಮಾರುತಿ ಪೆಜೋಳ್ಳಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ತಡರಾತ್ರಿಯವರೆಗೂ ನಡೆಯಿತು.
ಇರಾನ್ ಚಾಂಪಿಯನ್ ಮಿರ್ಜಾ ಇರಾನ್ ಮತ್ತು ಮಹಾರಾಷ್ಟ್ರ ಕೇಸರಿ ಮಹೇಂದ್ರ ಗಾಯಕವಾಡ ನಡೆದ ಕುಸ್ತಿಯಲ್ಲಿ ಮಿರ್ಜಾ ಇರಾನ ಕೇವಲ 30 ಸೆಕೆಂಡ್ನಲ್ಲಿ ಮಹೇಂದ್ರ ಗಾಯಕವಾಡ ಅವರನ್ನು ಎಕಚ್ ದಾವಪೇಚ್ನಿಂದ ನೆಲಕ್ಕುರುಳಿಸಿ ಟ್ರ್ಯಾಕ್ಟರ್ ಬಹುಮಾನ ತಮ್ಮದಾಗಿಸಿಕೊಂಡರು.
ನೇಪಾಳದ ದೇವಾ ತಾಪಾ ಹಾಗೂ ಹರಿದ್ವಾರದ ಅಮಿತ ಲಕ್ಕಾ ನಡುವೆ ನಡೆದ ಕುಸ್ತಿಯಲ್ಲಿ ದೇವಾ ತಾಪಾ ಜಯಶಾಲಿಯಾದರು. ಸೋನು ಕುಮಾರ ಹರಿಯಾನಾ ಹಾಗೂ ಮಾವಲಿ ಜಮದಾಡೆ ಮಹಾರಾಷ್ಟ್ರಾ ನಡುವೆ ಕುಸ್ತಿ ಪಂದ್ಯ ನಡೆದು ಮಾವಲಿ ಜಮದಾಡೆ ಜಯಶಾಲಿಯಾದರು.
ಗಾಯತ್ರಿ ಸುತಾರ ಹಾಗೂ ಪ್ರಿಸಿಟಾ ಸಿದ್ದಿ ನಡುವೆ ಸುಮಾರು 40 ನಿಮಿಷಗಳ ಕಾಲ ಕುಸ್ತಿ ಪಂದ್ಯ ನಡೆದು ಫಲಿತಾಂಶ ಕಾಣದ ಕಾರಣ ಪಾಯಿಂಟ್ ಆಧಾರಿತ ಕುಸ್ತಿ ನಡೆಸಲಾಯಿತು. ಗೆಲುವು ಸಾಧಿಸಿದ ಗಾಯತ್ರಿ ಸ್ಕೂಟಿ ಬಹುಮಾನ ತಮ್ಮದಾಗಿಸಿಕೊಂಡರು. ಸುಜಾತಾ ಪಾಟೀಲ ಹಾಗೂ ಶಾಲಿಸಿ ಸಿದ್ದಿ ನಡುವೆ ಸುಮಾರು 30 ನಿಮಿಷಗಳ ಕಾಲ ಕುಸ್ತಿ ಪಂದ್ಯ ನಡೆದು ಫಲಿತಾಂಶ ಸಿಗದ ಕಾರಣ ಟೇಕ್ ಡೌನ್ ಆಧಾರಿತವಾಗಿ ಶಾಲಿನಿ ಸಿದ್ದಿ ಜಯಶಾಲಿಯಾಗಿ ಸ್ಕೂಟಿ ತಮ್ಮದಾಗಿಸಿಕೊಂಡರು. ಸಿದ್ದಾರೂಡ ಹಾಗೂ ಮೌಲಿ ತುಪ್ಪಗಡೆ ಮುಂಬೈ ನಡುವೆ ನಡೆದು ಸಿದ್ದಾರೂಡ ಬುಲೇಟ್ ವಾಹನ ತಮ್ಮದಾಗಿಸಿಕೊಂಡರು.
ಕುಸ್ತಿ ಪಂದ್ಯಕ್ಕೆ ಚಾಲನೆ ನೀಡಿದ ಶಾಸಕ ಆರ್.ವಿ.ದೇಶಪಾಂಡೆ, ‘ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಉತ್ತೇಜನ ನೀಡುವ ಜೊತೆಗೆ ಭಾರತೀಯ ಪರಂಪರೆಯಾದ ಕುಸ್ತಿ ಕ್ರೀಡೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಇಂತಹ ಪಂದ್ಯಾವಳಿಗಳು ಪಾತ್ರವಹಿಸುತ್ತವೆ’ ಎಂದರು.
ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ, ‘ಕುಸ್ತಿಪಟುಗಳು ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಕೇಂದ್ರೀಕರಿಸಬೇಕು. ಇತರರಿಗೂ ದೇಹಾರೋಗ್ಯ ಮಾದರಿಯಾಗಬೇಕು’ ಎಂದರು.
ರಾಜು ಪೇಜೋಳ್ಳಿ ಮಾತನಾಡಿದರು. ಬೆಂಗಳೂರು ಗೋಸಾಯಿ ಮಠ ಗವಿಪುರಂನ ಮಂಜುನಾಥ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಖಾನಾಪುರ ಶಾಸಕ ವಿಠ್ಠಲ ಹಲಗೇಕರ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್.ಘೋಟ್ನೆಕರ, ಇತರರು ಪಾಲ್ಗೊಂಡಿದ್ದರು.
52 ಪೈಲ್ವಾನರಿಗೆ ಮಾಸಾಶನ
‘ಹಳಿಯಾಳ ಕ್ಷೇತ್ರದಲ್ಲಿ ಅನೇಕ ಮಾಜಿ ಪೈಲ್ವಾನರು ರಾಜ್ಯ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿ ಹಳಿಯಾಳದ ಹೆಸರನ್ನು ಎತ್ತರಕ್ಕೆ ತಂದುಕೊಟ್ಟಿದ್ದಾರೆ. ಅವರ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರ ಮಾಸಾಶನ ನೀಡುತ್ತಿದೆ. ಹಳಿಯಾಳ ತಾಲ್ಲೂಕೊಮದರಲ್ಲೇ 52 ಮಾಜಿ ಪೈಲ್ವಾನರು ಮಾಸಾಶನಕ್ಕೆ ಆಯ್ಕೆಯಾಗಿದ್ದಾರೆ. ಅರ್ಹ ಮಾಜಿ ಕುಸ್ತಿ ಪಟುಗಳು ಸರ್ಕಾರದ ಈ ಸೌಲಭ್ಯದಿಂದ ವಂಚಿತರಾಗದೆ ಲಾಭ ಪಡೆಯಬೇಕು’ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.