ADVERTISEMENT

ಬೆಳೆವಿಮೆ ನೋಂದಣಿಗೆ ತೊಡಕು

ವರ್ಷವೂ ಹಲವು ರೈತರಿಗೆ ಸಮಸ್ಯೆ

ರಾಜೇಂದ್ರ ಹೆಗಡೆ
Published 16 ಜುಲೈ 2024, 6:04 IST
Last Updated 16 ಜುಲೈ 2024, 6:04 IST
ಶುಂಠಿ ಕ್ಷೇತ್ರ (ಸಾಂದರ್ಭಿಕ)
ಶುಂಠಿ ಕ್ಷೇತ್ರ (ಸಾಂದರ್ಭಿಕ)   

ಶಿರಸಿ: ಹವಾಮಾನ ಆಧಾರಿತ ಬೆಳೆವಿಮೆ ನೋಂದಣಿಯಲ್ಲಿ ಭೂ ಒಡೆತನದ ಪ್ರಮಾಣಪತ್ರ (ಮ್ಯುಟೇಶನ್) ಸಲ್ಲಿಕೆ ಕಡ್ಡಾಯವಾಗಿರುವ ಕಾರಣಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನೂರಾರು ರೈತರು ಬೆಳೆವಿಮೆ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. 

2024-25ನೇ ಸಾಲಿನ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಜಿಲ್ಲೆಯಲ್ಲಿ ಅಡಿಕೆ, ಕಾಳುಮೆಣಸು, ಶುಂಠಿ, ಮಾವು ಬೆಳೆಯು ವಿಮಾ ವ್ಯಾಪ್ತಿಯಲ್ಲಿದ್ದು, ರೈತರು ಬೆಳೆಗೆ ವಿಮೆಯನ್ನು ಮಾಡಿಸಲು ಜು.31 ಕೊನೆಯ ದಿನಾಂಕವಾಗಿದೆ. ಹೀಗಾಗಿ ಕಳೆದ ವರ್ಷಗಳಲ್ಲಿ ವಿಮೆ ಪರಿಹಾರ ಪಡೆದ ಬಹುತೇಕ ಅಡಿಕೆ ಬೆಳೆಗಾರರು ಈ ಬಾರಿಯೂ ನೋಂದಣಿ ಮಾಡಿಸಿದ್ದಾರೆ. ಅಡಿಕೆ ಬೆಳೆಗೆ ಹೆಕ್ಟೇರ್‌ಗೆ ₹1.28 ಲಕ್ಷ ವಿಮೆ ಮೊತ್ತವಿದೆ. ಒಟ್ಟೂ ಮೊತ್ತದ ಶೇ 5ರಷ್ಟು ಅಂದರೆ ₹6,400 ಹಾಗೂ ಕಾಳುಮೆಣಸು ಪ್ರತಿ ಹೆಕ್ಟೇರ್‌ಗೆ ₹47 ಸಾವಿರದಂತೆ ₹2,350, ಶುಂಠಿ ಪ್ರತಿ ಹೆಕ್ಟೇರ್‌ಗೆ ₹1.30 ಲಕ್ಷಕ್ಕೆ ₹6,500 ಪ್ರೀಮಿಯಂ ಮೊತ್ತ ಪಾವತಿಸಿ ಸಾವಿರಾರು ರೈತರು ತಮ್ಮ ವ್ಯಾಪ್ತಿಯ ಸಹಕಾರಿ ಸಂಘಗಳಲ್ಲಿ ಬೆಳೆವಿಮೆ ನೋಂದಣಿ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಈ ನಡುವೆ ಕೆಲ ರೈತರು ಜಮೀನಿನ ‘ಮ್ಯುಟೇಶನ್’ ಕೈಸೇರದ ಕಾರಣಕ್ಕೆ ನೋಂದಣಿ ಮಾಡಿಸಲಾಗದೆ ಸೌಲಭ್ಯದಿಂದ ದೂರ ಉಳಿಯುವಂತಾಗಿದೆ.

‘ಹವಾಮಾನ ಆಧಾರಿತ ಬೆಳೆವಿಮೆ ನೋಂದಣಿಗೆ ರೈತರ ಹೆಸರಲ್ಲಿರುವ ಜಮೀನಿನ ‘ಮ್ಯುಟೇಶನ್’ ದಾಖಲೆ ಸಲ್ಲಿಸುವುದು ಕಡ್ಡಾಯ. ಆದರೆ ಮನೆಯ ಯಜಮಾನನ ಮರಣ, ಜಮೀನು ಖರೀದಿ, ಮಾರಾಟ ಸೇರಿ ವಿವಿಧ ಕಾರಣದಿಂದ ಹಲವು ರೈತರ ಹೆಸರಲ್ಲಿ ತಾತ್ಕಾಲಿಕವಾಗಿ ಮ್ಯುಟೇಶನ್ ದಾಖಲಾಗಿಲ್ಲ. ಪ್ರಸ್ತುತ ನೋಂದಣಿಗೆ ಇದು ಸಮಸ್ಯೆಯಾಗಿ ಮಾರ್ಪಟ್ಟಿದೆ’ ಎಂಬುದು ಹಲವು ರೈತರ ಮಾತಾಗಿದೆ. 

ADVERTISEMENT

‘ಮ್ಯುಟೇಶನ್ ದಾಖಲೆ ನೀಡದಿದ್ದರೆ ಸಹಕಾರಿ ಸಂಘಗಳಲ್ಲಿ ನೋಂದಣಿ ಪ್ರಕ್ರಿಯೆ ಮಾಡದೆ ವಾಪಸ್ ಕಳುಹಿಸಲಾಗುತ್ತಿದೆ. ಉಳಿದೆಲ್ಲ ದಾಖಲೆಗಳನ್ನು ನೀಡಿ ಕೇವಲ ಮ್ಯುಟೇಶನ್ ದಾಖಲಾತಿ ನೀಡಲಾಗದ್ದಕ್ಕೆ ಬೆಳೆವಿಮೆ ಸೌಲಭ್ಯ ಪಡೆಯಲು ಆಗದಂತಾಗಿದೆ. ಬೇರೆಯವರ ಹೆಸರಿನಲ್ಲಿರುವ ಮ್ಯುಟೇಶನ್ ನಮ್ಮ ಹೆಸರಿಗೆ ಆಗಲು ಸಮಯ ಹಿಡಿಯುತ್ತದೆ. ಆವರೆಗೆ ಹಳೆಯ ಮ್ಯುಟೇಶನ್ ದಾಖಲಾತಿಯನ್ನೇ ಮಾನದಂಡವಾಗಿ ಸ್ವೀಕರಿಸಲು ಅವಕಾಶ ಮಾಡಿಕೊಡಬೇಕು ಇಲ್ಲವೇ ಈ ದಾಖಲೆ ಪಡೆಯುವುದನ್ನೇ ಕೈಬಿಡಬೇಕು’ ಎಂಬುದು ರೈತರ ಒತ್ತಾಯವಾಗಿದೆ. 

ಮೃತ ತಂದೆಯ ಹೆಸರಲ್ಲಿರುವ ಜಮೀನು ನನ್ನ ಹೆಸರಿಗೆ ವರ್ಗಾವಣೆ ಆಗಬೇಕಿದೆ. ಆದರೆ ಅದಕ್ಕೆ ಸಮಯಾವಕಾಶ ಬೇಕಿದ್ದು ಬೆಳೆ ವಿಮೆ ನೋಂದಣಿಗೆ ತೊಡಕಾಗುತ್ತಿದೆ

-ಕೃಷ್ಣಮೂರ್ತಿ ಭಟ್ ಶಿರಸಿ, ರೈತ

ಮ್ಯುಟೇಶನ್ ವಿವರ ಸಂರಕ್ಷಣೆ ಬೆಳೆವಿಮೆ ಯೋಜನೆಯಡಿ ನೋಂದಣಿಗೆ ಸಮಸ್ಯೆ ಇರುವ ರೈತರ ಮ್ಯುಟೇಶನ್ ವಿವರವನ್ನು ಸಂರಕ್ಷಣೆ ತಾಂತ್ರಿಕ ತಂಡಕ್ಕೆ ತೋಟಗಾರಿಕಾ ಇಲಾಖೆ ಕಚೇರಿ ಮೂಲಕ ಕಳುಹಿಸಬೇಕು. ಈ ಬಗ್ಗೆ ಸಂಬಂಧಿತರ ದಾಖಲೆಗಳನ್ನು  ಕಚೇರಿಗಳಿಗೆ ಸಲ್ಲಿಸಲು ಸ್ಥಳೀಯ ಸಹಕಾರಿ ಸಂಘಗಳಿಗೆ ತಿಳಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿ ಗಣೇಶ ಹೆಗಡೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.