ಶಿರಸಿ: ಎನ್.ಡಬ್ಲು.ಕೆ.ಆರ್.ಟಿ.ಸಿ. ಶಿರಸಿ ವಿಭಾಗದ ಬಸ್ ನಿಲ್ದಾಣಗಳಲ್ಲಿ ನಿರ್ಮಿಸಿ ಖಾಲಿಯಿರುವ ಮಳಿಗೆಗಳು, ಪಾರ್ಕಿಂಗ್ ಪ್ರದೇಶಗಳಿಗೆ ಹತ್ತಾರು ಬಾರಿ ಗುತ್ತಿಗೆ ಕರೆದರೂ ಯಾರೂ ಗುತ್ತಿಗೆ ಪಡೆಯಲು ಆಸಕ್ತಿ ತೋರುತ್ತಿಲ್ಲ. ಹೆಚ್ಚಿನ ದರ ನಿಗದಿಪಡಿಸಿದ್ದು ಇದಕ್ಕೆ ಕಾರಣವಾಗಿದ್ದು, ಇದರಿಂದ ಸಂಸ್ಥೆಗೂ ಆದಾಯ ನಷ್ಟವಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುತೇಕ ತಾಲ್ಲೂಕುಗಳಲ್ಲಿ ಬಸ್ ನಿಲ್ದಾಣಗಳು ಉತ್ತಮ ಕಟ್ಟಡ ಹೊಂದುತ್ತಿವೆ. ಕಟ್ಟಡಗಳೇನೋ ದೊಡ್ಡದಾಗಿ, ಸುಸಜ್ಜಿತವಾಗಿ ನಿರ್ಮಾಣಗೊಂಡಿವೆ. ಆದರೆ ಆ ಕಟ್ಟಡಗಳಲ್ಲಿ ನಿರ್ಮಿಸಿರುವ ಹಲವಾರು ಮಳಿಗೆಗಳು ಉಪಯೋಗಕ್ಕೆ ಬರದೆ ಬಾಗಿಲು ಹಾಕಿದ ಸ್ಥಿತಿಯಲ್ಲಿಯೇ ಇರುವಂತಾಗಿದೆ. ಪಾರ್ಕಿಂಗ್ ಪ್ರದೇಶಗಳು ಸಾರ್ವತ್ರಿಕ ಉಚಿತ ವಾಹನ ನಿಲುಗಡೆ ಜಾಗವಾಗಿ ಮಾರ್ಪಟ್ಟಿವೆ. ಇವುಗಳನ್ನು ಗುತ್ತಿಗೆ ನೀಡಲು ಸಂಸ್ಥೆಯು ಅತಿ ಹೆಚ್ಚು ಮೊತ್ತ ನಿಗದಿ ಮಾಡುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
‘ಶಿರಸಿ ವಿಭಾಗದ ಅಡಿಯಲ್ಲಿ ಬರುವ 8 ಬಸ್ ನಿಲ್ದಾಣಗಳಲ್ಲಿ ಸುಮಾರು 15 ಮಳಿಗೆಗಳು, ಪಾರ್ಕಿಂಗ್ ಹಾಗೂ ಖಾಲಿ ಜಾಗ ಸರಾಸರಿ 2 – 3 ವರ್ಷಗಳಿಂದ ಖಾಲಿ ಇವೆ. ಸಾರಿಗೆ ಸಂಸ್ಥೆಯ ನಿಯಮಗಳ ಪ್ರಕಾರ ಮಳಿಗೆ ಖಾಲಿ ಆದ ಕೂಡಲೇ ಆ ಮಳಿಗೆಗಳಿಗೆ 2 ಬಾರಿ ಗುತ್ತಿಗೆ ಕರೆಯಲಾಗುತ್ತದೆ. ನಂತರ ಸಂಧಾನ ಪ್ರಕ್ರಿಯೆ ನಡೆಸಲಾಗುತ್ತದೆ. ಆದರೆ ಸರ್ಕಾರದ ಗುತ್ತಿಗೆ ಹಾಗೂ ಸಂಧಾನದ ಪ್ರಕಟಣೆಗೆ ಯಾವೊಬ್ಬ ವ್ಯಾಪಾರಿಯೂ ಮುಂದೆ ಬರುತ್ತಿಲ್ಲ. ಸಾಮಾನ್ಯ ಬಾಡಿಗೆದಾರ ನೀಡಲಾಗದಷ್ಟು ಶುಲ್ಕವನ್ನು ನಿಗದಿಪಡಿಸುತ್ತಿರುವುದೇ ಇದಕ್ಕೆ ಕಾರಣ’ ಎನ್ನುತ್ತಾರೆ ಶಿರಸಿಯ ವ್ಯಾಪಾರಿ ಅಬೂಬಕ್ಕರ್.
‘ಈಗಾಗಲೇ ಹಲವಾರು ಮಳಿಗೆಗಳಿಗೆ 7 ರಿಂದ 12ನೇ ಸಂಧಾನ ಪ್ರಕ್ರಿಯೆ ಜಾರಿಯಲ್ಲಿದೆ. ಅದೇ ರೀತಿ ಸಾರಿಗೆ ಸಂಸ್ಥೆ, ಬಸ್ ನಿಲ್ದಾಣ ಕಟ್ಟುವಾಗ ಅವೈಜ್ಞಾನಿಕವಾಗಿ ಮೊದಲನೇ ಮಹಡಿಯಲ್ಲಿ ಮಳಿಗೆಗಳನ್ನು ನಿರ್ಮಿಸಿದ್ದು, ಈ ಮಳಿಗೆಗಳನ್ನು ಕೇಳುವವರೇ ಇಲ್ಲವಾಗಿ ಅನಾಥ ಸ್ಥಿತಿಯಲ್ಲಿವೆ. ಖಾಲಿ ಇರುವ ಮಳಿಗೆಗಳಿಗೆ ಕನಿಷ್ಠ ಶುಲ್ಕ ನಿಗದಿಪಡಿಸಿದ್ದರೆ, ಇದರ ಲಾಭ ಸಾರಿಗೆ ಸಂಸ್ಥೆಗೆ ಬರುತ್ತಿತ್ತು. ಆದರೆ ಮಳಿಗೆ ಖಾಲಿ ಇದ್ದರೂ ಪರವಾಗಿಲ್ಲ, ನಮ್ಮ ಶುಲ್ಕ ಬಂದರೆ ಮಾತ್ರ ಮಳಿಗೆಗಳನ್ನು ಬಾಡಿಗೆಗೆ ನೀಡುತ್ತೇವೆ ಎನ್ನುವ ಕಠಿಣ ಮನಸ್ಥಿತಿಯಿಂದಾಗಿ ಸಂಸ್ಥೆಗೆ ಬೀಳುವ ನಷ್ಟದ ಪಾಲು ದುಪ್ಪಟ್ಟಾಗಿದೆ’ ಎನ್ನುತ್ತಾರೆ ಅವರು.
‘ಮಳಿಗೆಗಳನ್ನು 5 ಅಥವಾ 10 ವರ್ಷದ ಕರಾರಿನ ಮೇರೆಗೆ ಬಾಡಿಗೆಗೆ ನೀಡಲಾಗುತ್ತಿದೆ. ಕನಿಷ್ಠ ₹1,671ರಿಂದ ಗರಿಷ್ಠ ₹6.48 ಲಕ್ಷದವರೆಗಿದೆ. ಪ್ರತಿವರ್ಷ ಮಳಿಗೆಯ ಬಾಡಿಗೆಯ ಮೂಲ ಬೆಲೆಯ ಮೇಲೆ ಶೇ10ರಷ್ಟು ಏರಿಕೆಯಾಗುತ್ತದೆ. ಮೊದಲು ಬೇರೆ ಬೇರೆ ವಿಧದ ಅಂಗಡಿಗಳಿಗೆ ಅವಕಾಶ ನೀಡಲಾಗುತ್ತಿತ್ತು, ಆದರೆ ಈಗ ಆ ನಿಯಮವನ್ನು ತೆಗೆದು ಹಾಕಿದ್ದರ ಪರಿಣಾಮ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ’ ಎಂಬುದು ವ್ಯಾಪಾರಿಗಳ ಮಾತು.
5 ಅಥವಾ 10 ವರ್ಷದ ಕರಾರು ಅನ್ವಯ 15 ಮಳಿಗೆಗಳು ಖಾಲಿ ಅಂದಾಜು ₹20 ಲಕ್ಷ ಆದಾಯ ನಷ್ಟ
ಈ ಹಿಂದೆ ಕನಿಷ್ಠ ವಂತಿಗೆ ಇಟ್ಟಾಗ ಕೆಲವು ವ್ಯಾಪಾರಸ್ಥರು ಅದರ ದುರುಪಯೋಗಪಡಿಸಿಕೊಂಡಿದ್ದರಿಂದ ಕಠಿಣ ನಿಯಮ ಜಾರಿಗೆ ತರಲಾಗಿದೆ. ಕನಿಷ್ಠ ವಂತಿಗೆಯ ವಿಚಾರ ಮುಖ್ಯ ಕಚೇರಿಯ ತೀರ್ಮಾನಬಸವರಾಜ ಅಮ್ಮಣ್ಣನವರ ವಿಭಾಗೀಯ ನಿಯಂತ್ರಣಾಧಿಕಾರಿ
ಬಸ್ ನಿಲ್ದಾಣಗಳು: ಖಾಲಿಯಿರುವ ಮಳಿಗೆಗಳ ಸಂಖ್ಯೆ ಶಿರಸಿ;6 ಸಿದ್ದಾಪುರ;1 ಹೊನ್ನಾವರ;2 ಅಂಕೋಲಾ;1 ಯಲ್ಲಾಪುರ;2 ಮುಂಡಗೋಡ;2 ಮಳಗಿ;1
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.