
ಶಿರಸಿ: ನಗರಸಭೆ ತನ್ನ ಮಾಲೀಕತ್ವದ ಆಸ್ತಿಗಳನ್ನು ಕಬ್ಜಾ ಪಡೆಯಬೇಕು, ತೆರಿಗೆ ಸಂಗ್ರಹಣೆ ಸಮರ್ಪಕಗೊಳಿಸಬೇಕು, ಬಿಡಾಡಿ ದನ, ಬೀದಿ ನಾಯಿಗಳ ಹಾವಳಿ ನಿಯಂತ್ರಣದ ಜತೆ ಬೀದಿ ಬದಿ ವ್ಯಾಪಾರ ಕಾನೂನು ಬಿಗಿಗೊಳಿಸುವಂತೆ ನಗರಸಭೆ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಆಗ್ರಹಿಸಿದರು.
ಇಲ್ಲಿನ ಅಟಲ್ ಜಿ ಸಭಾಂಗಣದಲ್ಲಿ ಶನಿವಾರ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತ ಜಿ.ಜಿ.ಹೆಗಡೆ ಕಡೆಕೊಡಿ ಮಾತನಾಡಿ, ‘ನಗರಸಭೆ ಒಂದು ಚೌಕಟ್ಟಿನ ಆದಾಯದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು. ಇಂಥ ಸಂಧಿಗ್ದತೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಕೈಗೊಳ್ಳಲು ತೊಡಕಾಗುತ್ತದೆ. ಹಣಕಾಸಿನ ಸಮಸ್ಯೆ ಉದ್ಭವಿಸುತ್ತದೆ. ಆದರೆ ಆಸ್ತಿ ತೆರಿಗೆ, ನೀರಿನ ತೆರಿಗೆ, ಜಾಹಿರಾತು ಕರ, ಮಳಿಗೆಗಳ ಬಾಡಿಗೆ ಸೇರಿ ವಿವಿಧ ತೆರಿಗೆ ಸಂಗ್ರಹಣೆಯಲ್ಲಿ ನಗರಸಭೆ ವಿಫಲವಾಗಿದೆ. ಕೆಲವು ಕಟ್ಟಡಗಳ ಲೀಜ್ ನೀಡಿದ್ದು, ಅವಧಿ ಮುಗಿದರೂ ಸುಪರ್ದಿಗೆ ಪಡೆದಿಲ್ಲ. ಇದರಿಂದ ಆದಾಯ ನಷ್ಟವಾಗುತ್ತಿದೆ. ತೆರಿಗೆ ತುಂಬದವರಿಗೆ ದಂಡದ ಅಸ್ತ್ರ ಪ್ರಯೋಗ ಆಗುತ್ತಿಲ್ಲ’ ಎಂದರು.
‘ಬಿಡಾಡಿ ದನಗಳ ಹಾವಳಿ, ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆಯಿಂದ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಆದರೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಹೊಸ ಬಡಾವಣೆಗಳು ನಿರ್ಮಾಣ ಆಗುತ್ತಿವೆ. ಹೊಸ ರಸ್ತೆಗಳು, ಉದ್ಯಾನಗಳು ಆಗುತ್ತಿವೆ. ಆದರೆ ಅಲ್ಲಿ ನಗರಸಭೆ ಸ್ವಾಮಿತ್ವ ದಾಖಲಾಗುತ್ತಿಲ್ಲ. ನಗದೆಲ್ಲೆಡೆ ಅಪೂರ್ಣ ಕಾಮಗಾರಿಗಳ ಸಂಖ್ಯೆ ಹೆಚ್ಚಿದೆ. ಮಾರಿಕಾಂಬಾ ಜಾತ್ರೆಯಲ್ಲಿ ಸ್ವಚ್ಛತೆ ಸವಾಲಿನ ಕಾರ್ಯ. ಸಾಕಷ್ಟು ಹಣ ವೆಚ್ಚವಾಗುತ್ತದೆ. ಹಾಗಾಗಿ ನಗರಸಭೆಗೆ ಮಾರಿಕಾಂಬಾ ದೇವಾಲಯದಿಂದ ಬರಬಹುದಾದ ಹಣವನ್ನು ಮುಂಗಡವಾಗಿಯೇ ಬರಿಸಿಕೊಂಡರೆ ಅನುಕೂಲ ಆಗುತ್ತದೆ’ ಎಂದು ಹೇಳಿದರು.
‘ಈಗಾಗಲೇ ನಗರದಲ್ಲಿ ಯುಜಿಡಿ ಕಾಮಗಾರಿ ವಿಫಲವಾಗಿದೆ. ಗುಡ್ಡಗಾಡು ಪ್ರದೇಶವಾದ ಕಾರಣ ಇಂಥ ಅವೈಜ್ಞಾನಿಕ ಕಾಮಗಾರಿ ಮತ್ತೆ ಅನುಷ್ಠಾನ ಮಾಡಬಾರದು. ಪರಿಣಿತರ ಜತೆ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದ ಅವರು, ‘ವಾರ್ಡ್ ಸಮಿತಿ ರಚಿಸಿ, ಸಭೆ ನಡೆಸಿ ಆ ಪ್ರಕಾರ ನಗರಾಡಳಿತ ಕ್ರಮ ಕೈಗೊಂಡರೆ ಉತ್ತಮ ಆಡಳಿತ ನೀಡಲು ಸಾಧ್ಯ’ ಎಂದರು.
ಸಾಮಾಜಿಕ ಕಾರ್ಯಕರ್ತ ಪರಮಾನಂದ ಹೆಗಡೆ ಮಾತನಾಡಿ,‘ನಗರದಲ್ಲಿ ಅತಿಕ್ರಮಿಸಿ ಹಲವು ಅಂಗಡಿಗಳು ತಲೆ ಎತ್ತಿವೆ. ವಿವಿಧ ಕಾಮಗಾರಿಗಳ ಕಾರಣ ಕುಡಿಯುವ ನೀರಿನ ವ್ಯವಸ್ಥೆ ಹದಗೆಟ್ಟಿದೆ. ಇವುಗಳ ಮೇಲುಸ್ತುವಾರಿ ನೋಡುವವರು ಯಾರು?’ ಎಂದು ಪ್ರಶ್ನಿಸಿದರು.
‘ಕೊಂಡವಾಡೆ ಪ್ರಯೋಜನ ಪಡೆಯಲಾಗಿದೆಯೇ? ಎಂದ ಅವರು, ಹಲವೆಡೆ ರಸ್ತೆ ಕಾಮಗಾರಿ ಅರೆಬರೆಯಾಗಿದೆ. ದೂಳಿನ ಪ್ರಮಾಣ ಹೆಚ್ಚಿನ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ಕ್ರಮವಾಗುತ್ತಿಲ್ಲ. ತಕ್ಷಣ ದುರಸ್ತಿ ಕಾರ್ಯ ನಡೆಯಬೇಕು' ಎಂದರು.
ನಗರಸಭೆ ಮಾಜಿ ಸದಸ್ಯ ಪ್ರದೀಪ ಶೆಟ್ಟಿ ಮಾತನಾಡಿ, ಸಾರ್ವಜನಿಕ ಆಸ್ತಿ ರಕ್ಷಣೆಗೆ ನಗರಸಭೆಯಿಂದ ಯಾವುದೇ ಕ್ರಮವಾಗುತ್ತಿಲ್ಲ. ಹಲವು ಆಸ್ತಿಗಳ ಕಬ್ಜಾ ಪಡೆಯುವುದು ಬಾಕಿಯಿದೆ. ಹಾಗಾಗಿ ಕಾನೂನು ಹೋರಾಟಕ್ಕೆ ಹೆಚ್ಚಿನ ಮೊತ್ತ ಮೀಸಲಿಡಬೇಕು’ ಎಂದು ತಿಳಿಸಿದರು.
ಸಾರ್ವಜನಿಕರಿಂದ ಬಂದ ಸಲಹೆಗಳನ್ನು ಆದ್ಯತೆ ಮೇಲೆ ಪರಿಗಣಿಸಿ ಆ ಪ್ರಕಾರ ಆಯವ್ಯಯ ಮಂಡಿಸಲಾಗುವುದುಪ್ರಕಾಶ ಚನ್ನಪ್ಪನವರ ಪೌರಾಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.