
ಶಿರಸಿ: ಒಳನಾಡು ಮೀನುಗಾರಿಕೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ತಾಲ್ಲೂಕಿನ ದನಗನಹಳ್ಳಿ ಕೆರೆಯಲ್ಲಿ ಶುಕ್ರವಾರ ಆಸಕ್ತರಿಗೆ ಮೀನುಗಾರಿಕಾ ಕೌಶಲ ಪರೀಕ್ಷೆ ನಡೆಸಲಾಯಿತು. ಇದೇ ವೇಳೆ 21 ಜನರನ್ನು ಉದ್ದೇಶಿತ ಪುಣ್ಯಕೋಟಿ ಮೀನುಗಾರರ ಸಹಕಾರಿ ಸಂಘದ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಪರೀಕ್ಷೆಯಲ್ಲಿ ಪಾಲ್ಗೊಂಡವರಿಗೆ ಈಜು, ಬಲೆ ಬೀಸುವುದು, ಬಲೆ ಹೆಣೆಯುವುದು, ಮೀನು ಸ್ವಚ್ಛಗೊಳಿಸುವುದು, ದೋಣಿ ಚಲಾಯಿಸುವುದು ಹಾಗೂ ಮೀನು ಮಾರಾಟದ ಬಗ್ಗೆ ಪರೀಕ್ಷೆ ನಡೆಸಲಾಯಿತು. 50ಕ್ಕೂ ಹೆಚ್ಚಿನ ಜನ ಮೀನುಗಾರಿಕೆಯಲ್ಲಿ ಆಸಕ್ತಿಯಿದ್ದವರು ಪಾಲ್ಗೊಂಡಿದ್ದರು. ಈ ಪರೀಕ್ಷೆಯಲ್ಲಿ 10ಕ್ಕೂ ಹೆಚ್ಚಿನ ಮಹಿಳೆಯರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಬಿಪಿನ್ ಬೂಪಣ್ಣ ಮಾತನಾಡಿ, ಒಳನಾಡು ಭಾಗದಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಕೌಶಲ ಪರೀಕ್ಷೆ ಮಾಡಲಾಗುತ್ತಿದೆ. ಇದರಲ್ಲಿ ಆಯ್ಕೆಯಾದ ಜನರಿಗೆ ಸಂಘದ ಸದಸ್ಯರನ್ನಾಗಿ ಮಾಡಿ ಒಂದು ಸಂಘ ರಚಿಸಿಕೊಡಲಾಗುತ್ತದೆ. ನಂತರ ಇವರಿಗೆ ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ನೀಡಲಾಗುವುದು. ಸಂಘ ರಚನೆಗೊಂಡ ಮೇಲೆ ಸಂಘದಿಂದ ಕೆರೆಯನ್ನು ಪಡೆದು ನಿಗದಿತ ಹಣ ತುಂಬಿ ಕೆರೆ ಅಭಿವೃದ್ಧಿ ಪಡಿಸಬೇಕು ಮತ್ತು ಮೀನು ಮರಿಗಳನ್ನು ಬಿಟ್ಟು ಕಳ್ಳತನವಾಗದಂತೆ ನೋಡಿಕೊಳ್ಳಬೇಕು. ಇದಕ್ಕೆ ಸರ್ಕಾರ ನಿಮಗೆ ಸಹಕಾರ ನೀಡುತ್ತದೆ’ ಎಂದರು.
ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಪ್ರತೀಕ ಶೆಟ್ಟಿ, ಸಹಾಯಕ ನಿರ್ದೇಶಕ ವೈಭವ, ನಿಯೋಜಿತ ಪುಣ್ಯಕೋಟಿ ಮೀನುಗಾರಿಕೆ ಸಂಘದ ಮುಖ್ಯ ಪ್ರಭಂದಕ ಪುರುಷೋತ್ತಮ ದುರ್ಗಾ ಅಂಬಿಗಾ ಹಾಗೂ ಬದನಗೋಡ ಗ್ರಾಮ ಪಂಚಾಯಿತಿ ಅಧ್ಯಕ್ಷ ನಟರಾಜ ಹೊಸೂರ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.