ಶಿರಸಿ: ಇಲ್ಲಿನ ಜೀವಜಲ ಕಾರ್ಯಪಡೆ ಬಶೆಟ್ಟಿ ಕೆರೆ ಹೂಳೆತ್ತಿ, ಕೆರೆ ದಂಡೆಯ ಸುತ್ತಲೂ ಅಭಿವೃದ್ಧಿಪಡಿಸುವ ಕೆಲಸ ಕೈಗೆತ್ತಿಕೊಂಡಿದೆ.
ಕಳೆದ ಮೂರು ದಿನಗಳಿಂದ ಕೆರೆಯನ್ನು ಹೂಳೆತ್ತುವ ಕೆಲಸ ನಡೆಸಲಾಗಿದೆ. ನೀರಿನಲ್ಲಿದ್ದ ಕೆಸರು, ಪಾಚಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಜೆಸಿಬಿ ಬಳಸಿ ಹೊರತೆಗೆಯಲಾಗಿದೆ. ಕೆರೆಯ ನಾಲ್ಕು ಕಡೆಯಲ್ಲೂ ದಂಡೆಯ ಮೇಲೆ ಕಾಂಕ್ರೀಟ್ ಮಿಶ್ರಿತ ಮಣ್ಣು ಹರಡುವ ಕೆಲಸ ನಡೆದಿದೆ. ಅದನ್ನು ಸಮತಟ್ಟು ಮಾಡಲಾಗಿದೆ.
ಸುಮಾರು ಎರಡು ಎಕರೆಗೂ ಹೆಚ್ಚು ವಿಸ್ತಾರದ ಈ ಕೆರೆ ಅಭಿವೃದ್ಧಿಪಡಿಸಲು ನಗರಸಭೆ ಮುಂದಾಗಿಲ್ಲ ಎಂಬ ಆರೋಪಗಳಿದ್ದವು. ಈಚೆಗೆ ಕೆರೆ ವೀಕ್ಷಣೆ ನಡೆಸಿದ್ದ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಅಧಿಕಾರಿಗಳು ಕಾಯಕಲ್ಪದ ಕುರಿತು ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಅವರ ಜತೆ ಚರ್ಚಿಸಿದ್ದರು.
‘ಕಾರ್ಯಪಡೆಯಿಂದ ಹಲವು ಕೆರೆ ಅಭಿವೃದ್ಧಿಪಡಿಸುವ ಕೆಲಸ ನಡೆದಿತ್ತು. ಬಶೆಟ್ಟಿ ಕೆರೆಯನ್ನೂ ಈ ಬಾರಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿಕೊಳ್ಳಲಾಯಿತು. ಕೆರೆಯ ದಂಡೆಯಲ್ಲಿ ಉದ್ಯಾನಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಶ್ರೀನಿವಾಸ ಹೆಬ್ಬಾರ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.