ಶಿರಸಿ: ‘ನಗರದಲ್ಲಿ ಬಿಡಾಡಿ ದನಗಳ ಹಾವಳಿ ನಿಯಂತ್ರಿಸಲು ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿರುವ ಕೊಂಡವಾಡೆ ನಿರ್ವಹಣೆಯಿಲ್ಲದೇ ಹಾಳುಬಿದ್ದಿದೆ. ಅದಕ್ಕೆ ಅಗತ್ಯ ಹಣ ನೀಡುವ ಜತೆ ದುರಸ್ತಿ ಕಾರ್ಯ ನಡೆಸಿ ಬಿಡಾಡಿ ಜಾನುವಾರುಗಳನ್ನು ಅಲ್ಲಿ ಸಾಕಲು ಕ್ರಮ ವಹಿಸಬೇಕು’ ಎಂದು ಗುರುವಾರ ಹಿಂದೂ ಜಾಗರಣ ವೇದಿಕೆ ವತಿಯಿಂದ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರನ್ನು ಭೇಟಿಯಾಗಿ ಆಗ್ರಹಿಸಲಾಯಿತು.
‘ನಗರ ವ್ಯಾಪ್ತಿಯಲ್ಲಿರುವ ಬಿಡಾಡಿ ದನಗಳನ್ನು ಸಾಕಲು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕೊಂಡವಾಡೆ ಮಾಡಲಾಗಿದೆ. ಆದರೆ ಅಲ್ಲಿ ದನಗಳಿಲ್ಲ. ಎಲ್ಲ ಜಾನುವಾರುಗಳು ರಸ್ತೆಯ ಮೇಲೆ ಇರುತ್ತವೆ. ವಾಹನ ಅಪಘಾತದಲ್ಲಿ ಗಾಯಗೊಂಡ ಜಾನುವಾರುಗಳಿಗೆ ಕೊಂಡವಾಡೆಯಲ್ಲಿ ಆಶ್ರಯ ಸಿಗುತ್ತಿಲ್ಲ. ಕೊಂಡವಾಡೆಯಲ್ಲಿ ಜಾನುವಾರುಗಳಿಗೆ ಅಗತ್ಯವಿರುವ ಮೇವು ದಾಸ್ತಾನಿಲ್ಲ. ನಗರಸಭೆಯು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಆದಷ್ಟು ಶೀಘ್ರವಾಗಿ ಕೊಂಡವಾಡೆ ಆರಂಭಕ್ಕೆ ಕ್ರಮ ಕೈಗೊಂಡು ಬಿಡಾಡಿ ದನಗಳನ್ನು ಅಲ್ಲಿ ಆಶ್ರಯ ನೀಡಲು ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.
ಹಿಂದೂ ಜಾಗರಣ ವೇದಿಕೆಯ ಹರೀಶ ಕರ್ಕಿ ಮಾತನಾಡಿ, ‘ಗೋ ಕಳ್ಳತನ ತಡೆಯಲು ಪೊಲೀಸ್ ಇಲಾಖೆ ವಿಫಲವಾಗಿದೆ. ಬಿಡಾಡಿ ದನಗಳಿಗೆ ಕೊಂಡವಾಡೆಯಲ್ಲಿ ಆಶ್ರಯ ನೀಡಲು ನಗರಸಭೆಯು ಶೀಘ್ರ ಕ್ರಮ ಕೈಗೊಳ್ಳಬೇಕು. ಜೂನ್ 3ರೊಳಗೆ ಶಿರಸಿ ನಗರ ವ್ಯಾಪ್ತಿಯಲ್ಲಿರುವ ಬಿಡಾಡಿ ದನಗಳನ್ನು ಹಿಡಿದು ಕೊಂಡವಾಡೆಯಲ್ಲಿ ಆಶ್ರಯ ನೀಡಬೇಕು. ಇಲ್ಲವಾದಲ್ಲಿ ಜೂನ್ 4ರಂದು ಎಲ್ಲ ಜಾನುವಾರುಗಳನ್ನು ನಗರಸಭೆಯ ಆವರಣಕ್ಕೆ ತಂದು ಕಟ್ಟಿಹಾಕಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ನಗರಸಭೆ ಪ್ರಭಾರಿ ಪೌರಾಯುಕ್ತ ಶಿವರಾಜ ಪ್ರತಿಕ್ರಿಯಿಸಿ, ‘ಕೊಂಡವಾಡಿಯನ್ನು ನಗರಸಭೆಯಿಂದ ನಿರ್ವಹಣೆ ಮಾಡುವುದು ಕಷ್ಟಸಾಧ್ಯ. ಸ್ವಯಂ ಸೇವಾ ಸಂಸ್ಥೆಗಳು ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡರೆ ಒಂದು ಜಾನುವಾರಿಗೆ ಇಂತಿಷ್ಟು ಹಣ ಎಂದು ನಗರಸಭೆಯಿಂದ ಅವರಿಗೆ ನೀಡಲಾಗುತ್ತದೆ. ಅಧ್ಯಕ್ಷರು ಹಾಗೂ ಸದಸ್ಯರ ಜತೆ ಚರ್ಚಿಸಿ ಮುಂದಿನ ತೀರ್ಮಾಣ ತೆಗೆದುಕೊಳ್ಳಲಾಗುತ್ತದೆ’ ಎಂದರು.
ಕೃಷ್ಣಮೂರ್ತಿ ಭಟ್, ಹರ್ಷ ನಾಯ್ಕ, ಆದರ್ಶ, ರವಿ ಗೌಳಿ, ಅಮಿತ ಶೇಟ್, ಸತೀಶ ನಾಯ್ಕ, ಅಕ್ಷಯ ಮೊಗೇರ, ರಾಘವೇಂದ್ರ ಆಚಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.