ಶಿರಸಿ: ಗೋಕರ್ಣ– ವಡ್ಡಿ- ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿ (143) ಆಯ್ದ ಭಾಗದಲ್ಲಿ ಸುಮಾರು 4.5 ಕಿಮೀ ಉದ್ದದ ರಸ್ತೆ ಅಭಿವೃದ್ಧಿಗೆ ಕಾಮಗಾರಿಗೆ ತಾಲ್ಲೂಕಿನ ದೇವನಹಳ್ಳಿಯಲ್ಲಿ ಶಾಸಕ ಭೀಮಣ್ಣ ನಾಯ್ಕ ಚಾಲನೆ ನೀಡಿದರು.
₹10 ಕೋಟಿ ರೂ ವೆಚ್ಚದ ಬೃಹತ್ ರಸ್ತೆ ಸುಧಾರಣಾ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೇರವೆರಿಸಿ ಮಾತನಾಡಿದ ಅವರು, ಗೋಕರ್ಣ, ಯಾಣ, ಕಾರವಾರ ಹೀಗೆ ಪ್ರವಾಸಿ ತಾಣ, ಘಟ್ಟದ ಕೆಳಗಿನ ಪ್ರದೇಶಗಳಿಗೆ ಪ್ರತಿ ದಿವಸ ಸಾವಿರಾರು ವಾಹನಗಳ ಸಂಚಾರವಿದೆ. ಅವರಿಗೆ ಅನುಕೂಲವಾಗಲು ರಸ್ತೆ ಹಾಳಾದ ಕಡೆಗಳಲ್ಲಿ ಗುಣಮಟ್ಟದ ರಸ್ತೆ ಕಾಮಗಾರಿಗೆ ಆಗಲಿದೆ. ಜತೆಗೆ ದೇವನಹಳ್ಳಿಯಲ್ಲಿ ರಸ್ತೆ ವಿಸ್ತರಣೆಯೂ ನಡೆಯಲಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಜಲ್ಲಿಯೂ ಕಾಣದ ರಸ್ತೆಗಳನ್ನು ಕ್ಷೇತ್ರದಲ್ಲಿ ನಾವು ನೋಡಿದ್ದೇವೆ. ಅಂತಹ ಅಗತ್ಯ ಇರುವ ಕಡೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹಣ ನೀಡಲಾಗುತ್ತಿದೆ. ಚುನಾವಣೆಯ ಸಂದರ್ಭದಲ್ಲಿನ ಜನರ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುತ್ತಿದೆ. ಸರ್ಕಾರದಿಂದ ಗ್ಯಾರಂಟಿ ಯೋಜನೆಗಳೊಂದಿಗೆ ಎಲ್ಲಾ ಇಲಾಖೆಗಳಿಗೆ ಅಗತ್ಯ ಅನುದಾನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಮುಖರಾದ ಜಗದೀಶ ಗೌಡ, ಎಸ್.ಕೆ.ಭಾಗ್ವತ್, ನೀಲಕಂಠ ನಾಯ್ಕ ಸೇರಿದಂತೆ ದೇವನಹಳ್ಳಿ ಗ್ರಾಪಂ ಭಾಗದ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.