ಶಿರಸಿ: ‘ರಾಷ್ಟ್ರಕ್ಕಾಗಿ ತ್ಯಾಜ ಮಾಡಿದವರ ಬಗ್ಗೆ ಗೌರವ ಇದ್ದರೆ, ಯೋಧರನ್ನು ಅಪಮಾನಿಸಿರುವ ಶಂಕಿತ ಭಯೋತ್ಪಾದಕಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಭೋಪಾಲ್ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಈ ದೇಶದ ಜನರ ಬಳಿ ಕ್ಷಮೆ ಯಾಚಿಸಬೇಕು. ಚುನಾವಣಾ ಆಯೋಗವು ಅವರ ನಾಮಪತ್ರವನ್ನು ವಜಾಗೊಳಿಸಬೇಕು’ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಶನಿವಾರ ಇಲ್ಲಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿ ನಿಸ್ವಾರ್ಥ ಸೇವೆ ಮಾಡಿರುವ ಹೇಮಂತ ಕರ್ಕರೆ ಅವರು ಉಗ್ರವಾದಿಗಳ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ್ದಾರೆ. ಆದರೆ, ಪ್ರಜ್ಞಾ ಠಾಕೂರ್ ಅವರು ಹೇಮಂತ ಕರ್ಕರೆ ಸತ್ತಿದ್ದು ತನ್ನ ಶಾಪದಿಂದ ಎಂದು ಹೇಳುತ್ತಾರೆ. ಅವರನ್ನು ಟೀಕಿಸುವ ನೈತಿಕ ಹಕ್ಕು, ಜಾಮೀನಿನ ಮೇಲೆ ಹೊರಬಂದಿರುವ ಪ್ರಜ್ಞಾ ಅವರಿಗಿಲ್ಲ’ ಎಂದರು.
ಒಂದೊಮ್ಮೆ ನಾಥೂರಾಮ್ ಗೋಡ್ಸೆ ಬದುಕಿದ್ದರೆ, ಅವರನ್ನು ಸಹ ಬಿಜೆಪಿ, ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿಸುತ್ತಿತ್ತು. ಬಿಜೆಪಿಯು ದೇಶದ್ರೋಹಿ ಚಟುವಟಿಕೆ ನಡೆಸುತ್ತಿರುವವರಿಗೆ ಮಣೆ ಹಾಕುತ್ತಿದೆ ಎಂದು ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.