ಶಿರಸಿ: ಕೋವಿಡ್ 19 ಸಾಂಕ್ರಾಮಿಕ ಕಾಯಿಲೆ ಹರಡುತ್ತಿರುವ ಕಾರಣ, ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಆನ್ಲೈನ್ ಮೂಲಕ ಶಿಕ್ಷಣ ನೀಡುವುದು ಅನಿವಾರ್ಯವಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಶನಿವಾರ ಇಲ್ಲಿ ಕರೆದಿದ್ದ ಅಧಿಕಾರಿಗಳು, ಶಿಕ್ಷಣ ತಜ್ಞರು, ವೈದ್ಯರು, ಪಾಲಕರು, ಶಿಕ್ಷಣ ಸಂಸ್ಥೆಗಳ ಪ್ರಮುಖರ ಸಭೆಯಲ್ಲಿ ಅವರು ಸಾರ್ವಜನಿಕರ ಸಲಹೆ ಪಡೆದ ನಂತರ ಮಾತನಾಡಿದರು. ಆನ್ಲೈನ್ ಶಿಕ್ಷಣದಲ್ಲಿ ಮಕ್ಕಳ ಜೊತೆಗೆ ಪಾಲಕರನ್ನೂ ತೊಡಗಿಸಿಕೊಳ್ಳಬೇಕಾಗಿದೆ. ಆನ್ಲೈನ್ ಶಿಕ್ಷಣ ಸಿಗದೇ ಇದ್ದವರಿಗೂ ಪಠ್ಯ ಪರಿಕರಗಳು ಸಿಗುವಂತಾಗಬೇಕು ಎಂದರು.
ಈ ಬಾರಿ ಶೈಕ್ಷಣಿಕ ವರ್ಷ ವಿಳಂಬವಾಗುವುದರಿಂದ ಪಠ್ಯವನ್ನು ಕಡಿತ ಮಾಡಬೇಕು. ಕೆಲವು ಸಂಸ್ಥೆಗಳು ಈಗಾಗಲೇ ಆನ್ಲೈನ್ ಶಿಕ್ಷಣ ಪ್ರಾರಂಭಿಸಿವೆ. ಆದರೆ, ಎಲ್ಲ ಮಕ್ಕಳಿಗೂ ಈ ಶಿಕ್ಷಣ ಸಿಗಬೇಕು. ಜತೆಗೆ, ಇದರ ಅಡ್ಡ ಪರಿಣಾಮ ಆಗದಂತೆ ಎಚ್ಚರವಹಿಸಬೇಕು. ಇಂಟರ್ನೆಟ್ ಎಂಡ್ರಾಯ್ಡ್ ಮೊಬೈಲ್ ಇಲ್ಲದ ಗ್ರಾಮೀಣ ಭಾಗದ ಶ್ರಮಿಕರ ಮಕ್ಕಳಿಗೂ ಈ ಶಿಕ್ಷಣ ದೊರೆಯಬೇಕು. ಮಕ್ಕಳು ಮೊಬೈಲ್ ಚಟಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು. ಪ್ರಾಥಮಿಕ ಶಾಲಾ ಮಕ್ಕಳ ಪಠ್ಯವನ್ನು ಎನಿಮೇಷನ್ ಮೂಲಕ ತಿಳಿಸುವಂತೆ ಆಗಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಸಭೆಯಲ್ಲಿ ಡಿಡಿಪಿಐ ದಿವಾಕರ ಶೆಟ್ಟಿ, ಬಿಇಒಗಳಾದ ಎಂ.ಎಸ್.ಹೆಗಡೆ, ಎನ್.ಆರ್.ಹೆಗಡೆ, ಡಾ. ದಿನೇಶ ಹೆಗಡೆ, ಡಾ.ತನುಶ್ರೀ ಹೆಗಡೆ, ಶಿಕ್ಷಣ ಸಂಸ್ಥೆಗಳ ಪ್ರಮುಖರಾದ ಗಡೀಕೈ ನಾರಾಯಣ ಹೆಗಡೆ, ಎಂ.ಎಂ.ಭಟ್ಟ, ಗಣೇಶ ಭಟ್ಟ ಉಪ್ಪೋಣಿ, ಎಲ್.ಎಂ.ಹೆಗಡೆ, ಹಾಲಪ್ಪ ಜಕಲಣ್ಣನವರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.