ಶಿರಸಿ: ಅಯೋಧ್ಯೆಯಲ್ಲಿ ಉದ್ದೇಶಿತ ರಾಮಮಂದಿರ ನಿರ್ಮಾಣದ ಭೂಮಿಪೂಜೆ ಪ್ರಯುಕ್ತ ತಾಲ್ಲೂಕಿನ ವಿವಿಧೆಡೆಗಳಲ್ಲಿ ಪೂಜೆ ನಡೆಯಿತು.
ಸರ್ಕಾರದ ಆದೇಶದಂತೆ ಬುಧವಾರ ಬೆಳಿಗ್ಗೆ ಮಾರಿಕಾಂಬಾ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ರಾಮಮಂದಿರ ನಿರ್ಮಾಣ ಕಾರ್ಯ ಸಾಂಗವಾಗಿ ನೆರವೇರುವಂತೆ ಪ್ರಾರ್ಥಿಸಲಾಯಿತು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ದೇವಾಲಯದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ.ವೆಂಕಟೇಶ ನಾಯ್ಕ, ಉಪಾಧ್ಯಕ್ಷ ಮನೋಹರ ಮಲ್ಮನೆ ಭಾಗವಹಿಸಿದ್ದರು.
ರಾಮ ಮಂದಿರ ನಿರ್ಮಾಣಕ್ಕೆ ಯಾವುದೇ ವಿಘ್ನ ಬರದಿರಲೆಂದು ಪ್ರಾರ್ಥಸಿ, ಸುಪ್ರಸನ್ನ ನಗರದ ನಿವಾಸಿಗಳು ಮಹಾಗಣಪತಿ ದೇವರಿಗೆ ಪೂಜೆ ಸಲ್ಲಿಸಿದರು. ಪ್ರಸಾದ ರೂಪದಲ್ಲಿ ಸಿಹಿ ವಿತರಿಸಲಾಯಿತು. ನಿತ್ಯಾನಂದ ಮಠದ ಶ್ರೀರಾಮ ಮಂದಿರದಲ್ಲೂ ಪೂಜೆ ನಡೆಯಿತು. ತಾರಗೋಡಿನ ಕ್ಷೇತ್ರಪಾಲ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿತು.
ರಾಘವೇಂದ್ರ ವೃತ್ತದಲ್ಲಿ ಬಿಜೆಪಿ ಯುವಮೋರ್ಚಾ ಹಾಗೂ ರಾಘವೇಂದ್ರ ಸರ್ಕಲ್ ಗೆಳೆಯರ ಬಳಗದ ವತಿಯಿಂದ ಪೂಜಾ ಸಂಕಲ್ಪ ಕಾರ್ಯಕ್ರಮ ನಡೆಯಿತು. ಸೇರಿದ್ದ ಜನರು ಶ್ರೀರಾಮನ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಶ ಶೆಟ್ಟಿ, ಯುವಮೋರ್ಚಾ ಪ್ರಮುಖರಾದ ವಿಶಾಲ ಮರಾಠೆ, ನಾಗರಾಜ ನಾಯ್ಕ, ಮೋಹನ ಪೂಜಾರಿ, ರವಿ ಶೆಟ್ಟಿ, ಹರ್ಷರಾಜ ಟಿಕಾರೆ, ಚಂದ್ರಕಾಂತ ಸಿರ್ಸಿಕರ,ಶ್ರೀನಿವಾಸ ಹೆಬ್ಬಾರ್, ಶೋಭಾ ನಾಯ್ಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.