ಕಾರವಾರ: 'ಕರ್ತವ್ಯದಲ್ಲಿದ್ದರೆ ಮಾತ್ರವಲ್ಲ, ಕರ್ತವ್ಯದಿಂದ ನಿವೃತ್ತರಾದರೂ ಸಮಾಜದಲ್ಲಿ ಕಂಡುಬರುವ ಘಾತುಕ ಶಕ್ತಿಗಳ ಮಾಹಿತಿಯನ್ನು ಮೇಲಧಿಕಾರಿಗಳಿಗೆ ನೀಡುತ್ತಿರಬೇಕು. ನಿವೃತ್ತಿಯ ನಂತರವೂ ಪೊಲೀಸರು ಕರ್ತವ್ಯ ಪ್ರಜ್ಞೆ ಮೆರೆಯಬೇಕು' ಎಂದು ನಿವೃತ್ತ ಪಿಎಸ್ಐ ಮ್ಯಾಕ್ಸಿ ಡಿಸೋಜಾ ಹೇಳಿದರು.
ಅವರು ನಗರದ ಕೋಡಿಬಾಗದ ಪೊಲೀಸ್ ಪರೇಡ್ ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆಯ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದರು.
'ಪೊಲೀಸರು ಅವಿರತವಾಗಿ, ವಿಶ್ರಾಂತಿ ಪಡೆಯದೇ, ಕುಟುಂಬಕ್ಕೂ ಸಮಯ ಕೊಡದೇ ಕರ್ತವ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಈ ನಿವೃತ್ತಿ ಜೀವನವು ಕುಟುಂಬದೊಂದಿಗೆ, ಬಂಧುಗಳೊಂದಿಗೆ ಹಾಗೂ ಸಮಾಜದೊಂದಿಗೆ ಕಳೆಯಲು ದೊರೆಯುವ ಇನ್ನೊಂದು ಅವಕಾಶ' ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, 'ನಿವೃತ್ತ ಪೊಲೀಸರ ಕಲ್ಯಾಣಕ್ಕಾಗಿ ಪ್ರತಿವರ್ಷ ಏ.2ರಂದು ಧ್ವಜ ದಿನಾಚರಣೆ ಆಯೋಜಿಸಲಾಗುತ್ತಿದೆ. ಧ್ವಜ ಮಾರಾಟದಿಂದ ಸಂಗ್ರಹವಾಗುವ ಹಣವನ್ನು ನಿವೃತ್ತ ಪೊಲೀಸರು ಮತ್ತು ಅವರ ಕುಟುಂಬದವರ ಅಭಿವೃದ್ಧಿಗಾಗಿ ವಿನಿಯೋಗಿಸಲಾಗುತ್ತಿದೆ. ಕಳೆದ ವರ್ಷ ಕೂಡ ಹೆಚ್ಚಿನ ಹಣ ಸಂಗ್ರಹವಾಗಿತ್ತು. ಈ ವರ್ಷ ಸಾರ್ವಜನಿಕರಿಂದಲೂ ಹಣ ಸಂಗ್ರಹಿಸಲು ಯೋಜಿಸಲಾಗಿದೆ' ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ್ ವಂದನಾರ್ಪಣೆ ಮಾಡಿದರು.ಕಾರ್ಯಕ್ರಮಕ್ಕೂ ಮೊದಲು ಸಶಸ್ತ್ರ ಮೀಸಲು ಪಡೆಯ ಇನ್ಸ್ಪೆಕ್ಟರ್ ಸಚಿನ್ ಲಾರೆನ್ಸ್ ನೇತೃತ್ವದಲ್ಲಿ ತರಬೇತಿ ನಿರತ ಪೊಲೀಸರ ಆರು ತುಕಡಿಗಳಿಂದ ಆಕರ್ಷಕ ಪಥಸಂಚಲನ ನೆರವೇರಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.