ADVERTISEMENT

ಶಿರಸಿ: ಬೀದಿನಾಯಿಗಳಿಗೆ ದೀರ್ಘಾವಧಿ ಬಂಧನ!

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಸಿದ್ಧತೆ ಕೈಗೊಂಡ ನಗರಸಭೆ

ಗಣಪತಿ ಹೆಗಡೆ
Published 27 ನವೆಂಬರ್ 2022, 22:30 IST
Last Updated 27 ನವೆಂಬರ್ 2022, 22:30 IST
ಶಿರಸಿ ನಗರಸಭೆ ಸೆರೆಹಿಡಿಸಿರುವ ಬೀದಿನಾಯಿಗಳನ್ನು ಲಾಲಗೌಡರ್ ನಗರದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದ ಆವರಣದಲ್ಲಿ ಅಳವಡಿಸಲಾದ ಪಂಜರದಲ್ಲಿ ಇಟ್ಟಿರುವುದು
ಶಿರಸಿ ನಗರಸಭೆ ಸೆರೆಹಿಡಿಸಿರುವ ಬೀದಿನಾಯಿಗಳನ್ನು ಲಾಲಗೌಡರ್ ನಗರದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದ ಆವರಣದಲ್ಲಿ ಅಳವಡಿಸಲಾದ ಪಂಜರದಲ್ಲಿ ಇಟ್ಟಿರುವುದು   

ಶಿರಸಿ: ಬೀದಿನಾಯಿಗಳ ಸಂಖ್ಯೆ ನಿಯಂತ್ರಣದಲ್ಲಿಡುವ ಉದ್ದೇಶಕ್ಕೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಕೈಗೊಳ್ಳಲು ಎಂಟು ದಿನಗಳ ಹಿಂದೆಯೇ ನಗರಸಭೆ ಸುಮಾರು 30ಕ್ಕೂ ಹೆಚ್ಚು ನಾಯಿಗಳನ್ನು ಸೆರೆಹಿಡಿದು ಲಾಲಗೌಡರ್ ನಗರದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿರಿಸಿದೆ.

ಒಂದೆಡೆ ಬೀದಿನಾಯಿಗಳನ್ನು ವಾರಗಟ್ಟಲೆ ಸೆರೆಹಿಡಿದಿಟ್ಟಿರುವುದಕ್ಕೆ ಪ್ರಾಣಿಪ್ರಿಯರಿಂದ ಆಕ್ಷೇಪ ವ್ಯಕ್ತವಾಗಿದ್ದರೆ, ನಾಯಿ ಉಪಟಳದಿಂದ ಬೇಸತ್ತಿದ್ದ ಜನರು ಕ್ರಮವನ್ನು ಸ್ವಾಗತಿಸಿದ್ದಾರೆ. ಆರಕ್ಕೂ ಹೆಚ್ಚು ಪಂಜರಗಳನ್ನಿಟ್ಟು ಅದರಲ್ಲಿ ಸೆರೆಹಿಡಿಯಲ್ಪಟ್ಟ ನಾಯಿಗಳನ್ನು ಕೂಡಿ ಇಡಲಾಗಿದೆ.

ನಗರದಲ್ಲಿ ಬೀದಿನಾಯಿಗಳ ಸಂಖ್ಯೆ ಏರಿಕೆಯಾಗಿದ್ದು, ಹಲವೆಡೆ ನಾಯಿಯು ಮಕ್ಕಳ ಮೇಲೆ ದಾಳಿ ನಡೆಸಿದ ಘಟನೆಗಳು ನಡೆದಿದ್ದವು. ಕಳೆದ ವರ್ಷವಷ್ಟೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ನೂರಾರು ನಾಯಿಗಳಿಗೆ ನಗರಸಭೆ ಮಾಡಿದ್ದರೂ ಬೀದಿನಾಯಿ ಸಂಖ್ಯೆ ಹೆಚ್ಚಳವಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.

ADVERTISEMENT

ಶಿವಾಜಿಚೌಕ, ಹುಬ್ಬಳ್ಳಿ ರಸ್ತೆ, ಐದು ರಸ್ತೆ ಸೇರಿದಂತೆ ವಿವಿಧ ಭಾಗಗಳಲ್ಲಿ ಖಾಸಗಿ ಸಂಸ್ಥೆಯ ಸಿಬ್ಬಂದಿ ನಗರಸಭೆ ಸೂಚನೆ ಮೇರೆಗೆ ಕಳೆದ ವಾರ ನಾಯಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆ ಕೈಗೊಂಡಿದ್ದರು.

‘ಬೀದಿನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಿ ಅವುಗಳನ್ನು ಶೋಷಿಸುವುದು ತಪ್ಪು. ಅದರ ಬದಲು ನಾಯಿಗಳ ಉಪಟಳಕ್ಕೆ ನಗರಸಭೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಿತ್ತು. ವಾರಗಟ್ಟಲೆ ತ್ಯಾಜ್ಯ ವಿಲೇವಾರಿ ಘಟಕದಂತ ಸ್ಥಳಗಳಲ್ಲಿ ನಾಯಿಗಳನ್ನು ಕೂಡಿಡುವುದು ಪ್ರಾಣಿ ಹಿಂಸೆ ಮಾಡಿದಂತಾಗುತ್ತದೆ’ ಎಂದು ಪ್ರಾಣಿಪ್ರಿಯೆ ಜ್ಯೋತಿ ಶಿರ್ಸಿಕರ್ ಹೇಳಿದರು.

‘ಬೀದಿನಾಯಿ ಉಪಟಳ ತಡೆಯಲು ಸಾರ್ವಜನಿಕರು‌ ಮಾಡಿದ್ದ ಮನವಿಗೆ ಸ್ಪಂದಿಸಿದ ಕೆಲವು ಬೀದಿನಾಯಿಗಳನ್ನು ತುರ್ತಾಗಿ ಸೆರೆಹಿಡಿಯಲಾಗಿದೆ. ಅವುಗಳನ್ನು ಪ್ರಾಣಿ ಸಂರಕ್ಷಣಾ ಕಾಯ್ದೆಯ ನಿಯಮಾವಳಿ ಅನುಸರಿಸಿ ಸುರಕ್ಷಿತವಾಗಿ ಇಟ್ಟಿದ್ದೇವೆ. ನಿತ್ಯವೂ ಅವುಗಳಿಗೆ ಆಹಾರ, ನೀರು ಒದಗಿಸಲಾಗುತ್ತಿದೆ’ ಎಂದು ಪೌರಾಯುಕ್ತ ಕೇಶವ ಚೌಗುಲೆ ಪ್ರತಿಕ್ರಿಯಿಸಿದರು.

ಚರ್ಚಿಸುವ ಮೊದಲೇ ಸೆರೆ?

ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸುವ ಸಂಬಂಧ ಪಶು ಸಂಗೋಪನಾ ಇಲಾಖೆ ಜತೆ ಚರ್ಚಿಸುವ ಮುನ್ನವೇ ನಗರಸಭೆ ಬೀದಿನಾಯಿ ಸೆರೆಹಿಡಿಯುವ ಕಾರ್ಯಾಚರಣೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ. ಕಳೆದ ವಾರವೇ ನಗರಸಭೆ ಸೂಚನೆ ಮೇರೆಗೆ ಖಾಸಗಿ ಸಂಸ್ಥೆಯ ಸಿಬ್ಬಂದಿ ನಾಯಿಗಳನ್ನು ಸೆರೆಹಿಡಿದ್ದಾರೆ.

‘ನಗರಸಭೆಯಿಂದ ಮೂರು ದಿನದ ಹಿಂದೆ ಪತ್ರ ಬಂದಿದೆ. ಉಪನಿರ್ದೇಶಕರ ಗಮನಕ್ಕೆ ತಂದ ಬಳಿಕ ನಿರ್ಧರಿಸಲಾಗುವುದು’ ಎಂದು ಪಶು ಸಂಗೋಪನಾ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದರು.

‘ಶಸ್ತ್ರಚಿಕಿತ್ಸೆ ನಡೆಸುವ ಮೂರು ದಿನದ ಮೊದಲು ಸಾಮಾನ್ಯವಾಗಿ ನಾಯಿ ಸೆರೆಹಿಡಿಯಲಾಗುತ್ತದೆ. ವಾರಗಟ್ಟಲೆ ಮೊದಲು ಸೆರೆಹಿಡಿದು ಕೂಡಿಡುವುದು ಸಮಂಜಸವಲ್ಲ’ ಎಂದರು.

--------------------

ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಪಶು ಸಂಗೋಪನಾ ಇಲಾಖೆಗೆ ಪತ್ರ ಬರೆಯಲಾಗಿದೆ. ರೇಬಿಸ್ ಲಸಿಕೆ ನೀಡುವಂತೆಯೂ ವಿನಂತಿಸಿದ್ದೇವೆ.

ಕೇಶವ ಚೌಗುಲೆ, ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.