
ಶಿರಸಿ: ‘ಮೊಬೈಲ್ ಗೀಳಿನಿಂದ ಹೊರಬಂದು ಅಧ್ಯಯನದತ್ತ ವಿದ್ಯಾರ್ಥಿಗಳು ಗಮನ ನೀಡಬೇಕು. ಕಾಲಕಾಲಕ್ಕೆ ಶಿಕ್ಷಣ ಪಡೆಯದೇ ಹೋದರೆ ಮುಂದೆ ಬದುಕು ಕಷ್ಟವಾಗುತ್ತದೆ’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಅವರು ಶನಿವಾರ ನಗರದ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ‘ಪ್ರತಿಯೊಬ್ಬರ ಬಾಳು ಬೆಳಗಲು ಶಿಕ್ಷಣ ಬೇಕು. ಶಿಕ್ಷಣದ ಮೂಲಕ ಎಲ್ಲರ ಭವಿಷ್ಯದಲ್ಲೂ ಬೆಳಕು ನೀಡುವಂತಾಗಬೇಕು. ಈ ಬೆಳಕು ನಾಡಿನಲ್ಲಿ ಇಂದಿನ ಮಕ್ಕಳನ್ನು ಸತ್ಪ್ರಜೆಯಾಗಿ ಬೆಳೆಯಲು ಸಹಕಾರಿ ಆಗಲಿದೆ. ನಮ್ಮ ಆಚಾರ ವಿಚಾರ, ಸಂಸ್ಕೃತಿಗಳ ಜತೆಗೆ ಸಾಧನೆ ಮಾಡಬೇಕು. ಓದಿನ ಜತೆ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಆಸಕ್ತಿ ಬೆಳಸಿಕೊಂಡರೆ ಮಾತ್ರ ಪರಿಪೂರ್ಣವಾಗಲು ಸಾಧ್ಯ’ ಎಂದರು.
‘ರಾಜ್ಯದಲ್ಲಿ ಗಮನ ಸೆಳೆದ ಸರ್ಕಾರಿ ಪ್ರೌಢಶಾಲೆ ಶಿರಸಿ ಮಾರಿಕಾಂಬಾ ಪ್ರೌಡಶಾಲೆಯಾಗಿದೆ. ಕಳೆದ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಮಟ್ಟದ 10 ರ್ಯಾಂಕ್ಗಳಲ್ಲಿ 22 ಮಕ್ಕಳು ಸ್ಥಾನ ಪಡೆದಿದ್ದಾರೆ. 1,500 ಮಕ್ಕಳು ಓದುತ್ತಿದ್ದಾರೆ. ಮುಂದೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಬೇಕು’ ಎಂದ ಅವರು, ‘ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಇಲ್ಲಿಂದ ಮಕ್ಕಳು ಓದಲು ಹೋಗುತ್ತಿದ್ದಾರೆ. ಆದರೆ, ನಮ್ಮ ಸರ್ಕಾರಿ ಶಾಲೆಗಳು ಯಾವುದಕ್ಕೂ ಕಡಿಮೆ ಇಲ್ಲ. ಇಲ್ಲಿ ಗುಣಮಟ್ಟದ ಶಿಕ್ಷಣ ಅಷ್ಟೇ ಸಿಗುತ್ತಿದೆ’ ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಪ್ರದೀಪ ಶೆಟ್ಟಿ, ಡಯಟ್ ಪ್ರಾಚಾರ್ಯ ಎಂ.ಎಸ್.ಹೆಗಡೆ, ಬಿಇಒ ನಾಗರಾಜ ನಾಯ್ಕ, ಉಪಾಧ್ಯಕ್ಷ ಮಂಜುನಾಥ ಶೆಟ್ಟರ, ಜಯರಾಮ ನಾಯ್ಕ, ಹವಳಪ್ಪ ಗೌಡ, ಸುಮಾ ಜಡೆ, ಸುಮಾ ನೇತ್ರೇಕರ, ಶ್ರೀನಿವಾಸ ನಾಯ್ಕ, ಗೀತಾ ಶೆಟ್ಟಿ, ದತ್ತಾತ್ರಯ ರಾವ್ ಸೇರಿದಂತೆ ಅನೇಕರು ಇದ್ದರು.
ಪ್ರಾಚಾರ್ಯ ಆರ್.ವಿ.ನಾಯ್ಕ ಸ್ವಾಗತಿಸಿದರು. ಸರೋಜಿನಿ ನಾಯ್ಕ ವರದಿ ವಾಚಿಸಿದರು. ಶ್ರೀಧರ ನಾಯ್ಕ ನಿರ್ವಹಿಸಿದರು. ಆರ್.ಕೆ.ಹೆಗಡೆ ವಂದಿಸಿದರು. ಇದೇ ವೇಳೆ ವರ್ಗವಾದ ಶಿಕ್ಷಕರನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಾಸಕ ಭೀಮಣ್ಣ ನಾಯ್ಕ ಅವರು ತಮ್ಮ ಸಹೋದರನ ಹೆಸರಿನಲ್ಲಿ ₹1 ಲಕ್ಷ ಮೊತ್ತದ ದತ್ತಿನಿಧಿಯನ್ನು ಸ್ಥಾಪಿಸುವದಾಗಿ ಘೋಷಿಸಿದರು.
ಮಕ್ಕಳಿಗೆ ಒಳ್ಳೆಯದಾದರೆ ಭವಿಷ್ಯದ ಸಮಾಜಕ್ಕೆ ಒಳಿತಾಗುತ್ತದೆ. ಸರಕಾರಿ ಶಾಲೆ ಎಂದರೆ ಮೂಗು ಮುರಿಯುವಂತಿಲ್ಲ. ಗುಣಮಟ್ಟದ ಶಿಕ್ಷಣದ ಜೊತೆ ಮಕ್ಕಳ ಏಳ್ಗೆಯ ಕನಸು ನಮ್ಮದು.–ಭೀಮಣ್ಣ ನಾಯ್ಕ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.