ಶಿರಸಿ: ‘ಗಿಡ, ಕಳೆಗಳಿಂದ ಮುಚ್ಚಿ ಹೋಗಿರುವ ಎಕ್ಕಂಬಿ ಗ್ರಾಮದ ಕೆರೆಯನ್ನು ಸಂರಕ್ಷಿಸಿ. ಈ ಕೆರೆಯನ್ನು ಹೂಳೆತ್ತಿ ನೀರು ತುಂಬಲು ಅವಕಾಶ ಕೊಡಿ’ ಎಂಬ ಭಿತ್ತಿಪತ್ರವನ್ನು ಕೆರೆಯ ಸುತ್ತ ಅಂಟಿಸಿ ಜಾಗೃತಿ ಮೂಡಿಸಿದವರು ಪರಿಸರವಾದಿಗಳಲ್ಲ, ಬಿಸಲಕೊಪ್ಪದ ಸೂರ್ಯ ನಾರಾಯಣ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳು.
ಬಿಸಲಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಕ್ಕಂಬಿಯಲ್ಲಿ ಶಿರಸಿ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ದೊಡ್ಡ ಕೆರೆ ಇದೆ. ನಿರ್ವಹಣೆ ಇಲ್ಲದ ಕಾರಣ ಹೂಳು ತುಂಬಿ, ಗಿಡಗಂಟಿಗಳು ಬೆಳೆದು ನಿಂತಿವೆ. ಕೆರೆ ಸ್ವಚ್ಛಗೊಳಿಸಬೇಕು ಎಂಬ ಬೇಡಿಕೆ ಈಡೇರಿಕೆಗೆ ಗಣರಾಜ್ಯೋತ್ಸವದ ದಿನ ವಿದ್ಯಾರ್ಥಿಗಳು ಆಗ್ರಹಿಸಿದರು.
‘ವಿಜ್ಞಾನ ವಿಷಯದಲ್ಲಿ ಜೀವವೈವಿಧ್ಯ ಸಂರಕ್ಷಣೆಯ ಕುರಿತ ಪಾಠದಿಂದ ಪ್ರಭಾವಿತತಾಗಿದ್ದೇವೆ. ನಮ್ಮೂರಿನ ಕೆರೆಯನ್ನು ಸಂರಕ್ಷಿಸಿದರೆ ಜೀವ ಸಂಕುಲದ ಉಳಿವಿಗೆ ಸಣ್ಣ ಕೊಡುಗೆ ನೀಡಿದಂತಾಗುತ್ತದೆ ಎಂಬ ಭಾವನೆ ಮೂಡಿತು. ಹೀಗಾಗಿ ಗ್ರಾಮಸ್ಥರನ್ನು ಪ್ರೇರೇಪಿಸಲು ಭಿತ್ತಿಪತ್ರಗಳ ಮೂಲಕ ಜಾಗೃತಿ ಮೂಡಿಸಿದ್ದೇವೆ’ ಎಂದು ವಿದ್ಯಾರ್ಥಿಗಳು ತಿಳಿಸಿದರು.
‘ಕೆರೆ ಅಭಿವೃದ್ಧಿಪಡಿಸಲು ಗ್ರಾಮಸ್ಥರು ಮುಂದಾದರೆ, ನಾವೂ ಅಳಿಲು ಸೇವೆ ನೀಡಲು ಸಿದ್ಧರಿದ್ದೇವೆ. ಗಿಡಗಂಟಿಗಳನ್ನು ಸ್ವಚ್ಛಗೊಳಿಸಲು ಜನರಿಗೆ ಸಹಕರಿಸುತ್ತೇವೆ. ಇದನ್ನು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಕೆಲವು ಗ್ರಾಮಸ್ಥರು ನಮ್ಮ ಜಾಗೃತಿ ಕಾರ್ಯಕ್ಕೆ ಸಹಕಾರ ನೀಡಿದರು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.