ಕಾರವಾರ:ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸಿದ ಹೊನ್ನಾವರದ ಕಲ್ಪತರು ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನ ಪ್ರಾಂಶುಪಾಲ ಗಂಗಾಧರನ್ ಬಂಧಿಸಬೇಕು. ಹಣ ವಾಪಸ್ ಕೊಡಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಗುರುವಾರ ಧರಣಿ ಹಮ್ಮಿಕೊಂಡರು.
‘ಕಾಲೇಜಿನ 300 ವಿದ್ಯಾರ್ಥಿಗಳಿಗೆ ಓದು ಪೂರ್ಣಗೊಂಡ ಬಳಿಕ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿದ್ದ ಗಂಗಾಧರನ್, ತಲಾ ₹ 1.50 ಲಕ್ಷ ಪಡೆದುಕೊಂಡಿದ್ದಾರೆ. ಅಲ್ಲದೇ ಕೆಲಸಕ್ಕೆ ಸೇರಿದ ಬಳಿಕ ಪ್ರತಿ ತಿಂಗಳಿಗೆ ₹ 99 ಸಾವಿರ ವೇತನ ನೀಡುತ್ತಾರೆ ಎಂದು ವಿದ್ಯಾರ್ಥಿಗಳನ್ನು ನಂಬಿಸಲಾಗಿದೆ. ಆದರೆ, ಅತ್ತ ಕೆಲಸವೂ ಕೊಡಿಸದೇ ಹಣವನ್ನೂ ವಾಪಸ್ ಮಾಡದೇ ತಲೆ ಮರೆಸಿಕೊಂಡಿದ್ದಾರೆ. ನಮಗೆ ನ್ಯಾಯ ಕೊಡಿಸಬೇಕು’ ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ಧರಣಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಆರೋಪಿಯ ಪತ್ತೆಗೆ ಪೊಲೀಸರ ಎರಡು ತಂಡಗಳನ್ನು ಈಗಾಗಲೇ ರಚಿಸಲಾಗಿದೆ. ಭಟ್ಕಳ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ’ ಎಂದು ತಿಳಿಸಿದರು.
ಬಳಿಕ ವಿದ್ಯಾರ್ಥಿಗಳು ಧರಣಿ ಹಿಂಪಡೆದರು. ಒಕ್ಕೂಟದ ಜಿಲ್ಲಾಘಟಕದ ಅಧ್ಯಕ್ಷ ರಾಘು ವಿ.ನಾಯ್ಕ ಹಾಗೂ ವಿದ್ಯಾರ್ಥಿಗಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.