ಶಿರಸಿ: ಎಸ್ಡಿಪಿಐ ಹಾಗೂ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.) ಸಂಘಟನೆಯಲ್ಲಿ ಸಕ್ರೀಯನಾಗಿದ್ದು ಸಂಶಯಾಸ್ಪದ ಚಟುವಟಿಕೆಯಲ್ಲಿ ಭಾಗಿಯಾಗಿರುವ ಗುಮಾನಿ ಮೇಲೆ ಇಲ್ಲಿನ ಟಿಪ್ಪು ನಗರದ ವ್ಯಕ್ತಿಯೊಬ್ಬನನ್ನು ಕೇಂದ್ರೀಯ ಗುಪ್ತಚರ ದಳ (ಐ.ಬಿ.) ಗುರುವಾರ ನಸುಕಿನ ಜಾವ ವಶಕ್ಕೆ ಪಡೆದಿದೆ.
ಅಬ್ದುಲ್ ಅಜೀಜ್ ಶುಕೂರ್ ಹೊನ್ನಾವರ (43) ಬಂಧಿತ ವ್ಯಕ್ತಿ. ನಸುಕಿನ ಜಾವ ಆತನ ಮನೆಯ ಮೇಲೆ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಖಾಸಗಿ ವಾಹನಗಳಲ್ಲಿ ಬಂದು ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ.
'ಬಂಧಿತ ಅಬ್ದುಲ್ ಕಿರಿಯ ಸಹೋದರ ಮೌಸಿನ್ ಹೊನ್ನಾವರ (36) ಎಂಬಾತ ಸಂಶಯಾಸ್ಪದ ಚಟುವಟಿಕೆಯಲ್ಲಿ ತೊಡಗಿರುವ ಕುರಿತು ಕೇಂದ್ರ ಗುಪ್ತಚರ ದಳ ಶಂಕೆ ಹೊಂದಿತ್ತು. ಈ ಹಿನ್ನೆಲೆಯಲ್ಲಿ ಆತನ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆ ವೇಳೆ ಆತ ಪತ್ತೆಯಾಗಿಲ್ಲ. ಹೀಗಾಗಿ ಆತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಸಹೋದರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ' ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
ದಾಳಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಿರಸಿ ನಗರದ ಹಲವೆಡೆ ಪೊಲೀಸ್ ಕಾವಲು ಹಾಕಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.