ಕಾರವಾರ: ತಾಲ್ಲೂಕಿನ ಕಡವಾಡ ಸಾಸನವಾಡದ ಗುಡ್ಡದಲ್ಲಿ ಮಣ್ಣು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದ ಕೆಳಭಾಗದ ನಿವಾಸಿಗಳನ್ನು ಸ್ಥಳಾಂತರಿಸಲು ತಹಶೀಲ್ದಾರ್ ನಿಶ್ಚಲ್ ನರೋನಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗಣಿಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ ಅಧಿಕಾರಿಗಳ ತಂಡವು ಬುಧವಾರ ಭೇಟಿ ನೀಡಿ ಪರಿಶೀಲಿಸಿತು. ಕಂದಾಯ, ಗಣಿ ಮತ್ತು ಭೂ ವಿಜ್ಞಾನ, ಅರಣ್ಯ ಇಲಾಖೆಯ ಅಧಿಕಾರಿಗಳಿದ್ದರು.
‘ಗುಡ್ಡದ ಮಣ್ಣನ್ನು ಬಗೆದಿರುವ ಕಾರಣ ಕೆಳಭಾಗದ ಮನೆಗಳಿಗೆ ತೊಂದರೆ ಆಗಬಹುದು. ಆದ್ದರಿಂದ ಮಳೆಗಾಲದ ಅವಧಿಯಲ್ಲಿ ಅವರಿಗೆ ಪಕ್ಕದಲ್ಲಿರುವ ಶಾಲೆಯಲ್ಲಿ ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುವುದು. ಅಧಿಕಾರಿಗಳ ವರದಿಯನ್ನು ಪರಿಶೀಲಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ತಿಳಿಸಿದರು.
ಇದನ್ನು ಓದಿ–ಮಣ್ಣು ಗಣಿಗಾರಿಕೆ: ಮನೆ ಮೇಲೆ ಬಂಡೆ ಉರುಳುವ ಭೀತಿ
ಗ್ರಾಮದಲ್ಲಿ ಗುಡ್ಡದ ಮಣ್ಣನ್ನು ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಯಂತ್ರಗಳ ಮೂಲಕ ತೆಗೆಯಲಾಗುತ್ತಿದೆ. ಅಲ್ಲದೇ ಭಾರಿ ಗಾತ್ರದ ಬಂಡೆಗಲ್ಲುಗಳನ್ನು ಗುಡ್ಡದ ಅಂಚಿನಲ್ಲಿ ಜೋಡಿಸಿಡಲಾಗಿದೆ. ಇದರಿಂದ ಕೆಳಭಾಗದಲ್ಲಿರುವ ಮನೆಗಳು ಮತ್ತು ರಸ್ತೆಗೆ ಅಪಾಯ ಉಂಟಾಗುವ ಸಾಧ್ಯತೆಯಿದೆ. ಈ ಬಗ್ಗೆ ‘ಪ್ರಜಾವಾಣಿ’ಯ ಜೂನ್ 8ರ ಸಂಚಿಕೆಯಲ್ಲಿ ವಿಸ್ತೃತ ವರದಿ ಪ್ರಕಟವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.