ಸಿದ್ದಾಪುರ: ತಾಲ್ಲೂಕಿನ ಹೆಗ್ಗರಣಿ ಸಮೀಪದ ಕೋಡನಮನೆ ಸೇತುವೆಯಿಂದ ಹೊಳೆಗೆ ಕಾರು ಬಿದ್ದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ. ಹುಬ್ಬಳ್ಳಿಯ ನಿಶ್ಚಲ (20), ರೋಶನ್ (20), ಸುಷ್ಮಾ (20) ಮತ್ತು ಅಕ್ಷತಾ ಹಿರೇಮಠ (21) ಎಂಬವರು ಮೃತಪಟ್ಟವರು.
ಸ್ನೇಹಿತರ ಮನೆಗೆ ಬಂದು, ಉಂಚಳ್ಳಿ ಜಲಪಾತ ನೋಡಿಕೊಂಡು ಬುಧವಾರ ಸಂಜೆ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಕಾರು ಹೊಳೆಗೆ ಬಿದ್ದ ಸ್ಥಳದಿಂದ ಸುಮಾರು 75 ಮೀಟರ್ ಕೆಳಭಾಗದಲ್ಲಿ ಪತ್ತೆಯಾಗಿದೆ. ಬುಧವಾರ ಸಂಜೆ ತಾಲ್ಲೂಕಿನಲ್ಲಿ ಭಾರಿ ಮಳೆ ಬಿದ್ದಿದ್ದು, ಗುರುವಾರ ಮಧ್ಯಾಹ್ನ ಹೊಳೆಯಲ್ಲಿ ನೀರು ಕಡಿಮೆಯಾದ ನಂತರ ಕಾರು ಸ್ಥಳೀಯರ ಗಮನಕ್ಕೆ ಬಂದಿತು. ಅವರು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ತಿಳಿದುಬಂದಿದೆ.
ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಶವ ಹುಡುಕಾಟದ ಕಾರ್ಯಾಚರಣೆಯನ್ನು ಸಂಜೆಯವರೆಗೂ ನಡೆಸಿದ್ದು, ಮೂವರ ಶವ ಪತ್ತೆಯಾಗಿದೆ. ಅಕ್ಷತಾ ಹಿರೇಮಠ ಶವ ಪತ್ತೆಯಾಗಿರಲಿಲ್ಲ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಡಿ.ವೈ.ಎಸ್.ಪಿ ಜಿ.ಟಿ ನಾಯ್ಕ, ಪಿ.ಐ ಪ್ರಕಾಶ, ಪಿ.ಎಸ್.ಐ ಮಂಜುನಾಥ ಬಾರ್ಕಿ ಸ್ಥಳಕ್ಕೆ ಭೇಟಿ ನೀಡಿ, ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.