ADVERTISEMENT

ಬ್ಯಾಂಕ್ ಅಧಿಕಾರಿಯೆಂದು ಮಹಿಳೆಗೆ ವಂಚನೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 16:10 IST
Last Updated 1 ಆಗಸ್ಟ್ 2022, 16:10 IST

ಕಾರವಾರ: ₹ 10 ಸಾವಿರ ಠೇವಣಿ ಮಾಡಿದರೆ, 85 ದಿನಗಳಲ್ಲಿ ₹ 2.25 ಲಕ್ಷ ಮರಳಿ ಕೊಡುವುದಾಗಿ ನಂಬಿಸಿ, ಮಹಿಳೆಯೊಬ್ಬರಿಗೆ ವಂಚಿಸಿದ ಆರೋಪಿಗಳನ್ನು ನಗರದ ಸಿ.ಇ.ಎನ್. ಅ‍ಪರಾಧಗಳ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕುಮಟಾದ ನೆಲ್ಲಿಕೇರಿ ನಿವಾಸಿ ಮುಸ್ತಫಾ ಹಾಗೂ ಉತ್ತರ ಪ್ರದೇಶದ ಬರೇಲಿಯ ಫರಿದಾಪುರದ ಮಹಮ್ಮದ್ ರಿಜ್ವಾನ್ ಬಂಧಿತರು. ಆತ ಕೂಡ ಪ್ರಸ್ತುತ ನೆಲ್ಲಿಕೇರಿಯಲ್ಲಿ ವಾಸವಿದ್ದ.

ಅಂಕೋಲಾ ತಾಲ್ಲೂಕಿನ ಅವರ್ಸಾದ ಮಹಿಳೆಯೊಬ್ಬರಿಗೆ ಜುಲೈ 4ರಂದು ಕರೆ ಮಾಡಿದ್ದ ಆರೋಪಿಯೊಬ್ಬ, ತಾನು ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಆತನ ನಯವಾದ ಮಾತನ್ನು ನಂಬಿದ್ದ ಮಹಿಳೆಯು, ₹ 10 ಸಾವಿರನ್ನು ಹಣ ವರ್ಗಾವಣೆಯ ಆ್ಯಪ್ ಮೂಲಕ ವರ್ಗಾಯಿಸಿದ್ದರು. ಆದರೆ, ಆರೋಪಿಗಳು ಯಾವುದೇ ದಾಖಲೆಗಳನ್ನೂ ನೀಡದಿದ್ದಾಗ ಅನುಮಾನ ಬಂದು ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದರು. ಜುಲೈ 31ರಂದು ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ADVERTISEMENT

ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿ.ಇ.ಎನ್ ಅಪರಾಧ ಠಾಣೆಯ ಇನ್‌ಸ್ಪೆಕ್ಟರ್ ನಿತ್ಯಾನಂದ ಪಂಡಿತ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಸಿಬ್ಬಂದಿಗಳಾದ ಸುದರ್ಶನ ನಾಯ್ಕ, ಮಂಜುನಾಥ ಹೆಗಡೆ, ಮಹೇಶ, ಕೃಷ್ಣ, ರಾಜು, ಚಂದ್ರಶೇಖರ, ಶಿವಾನಂದ, ಹನುಮಂತ, ವಿವೇಕ, ಉಮೇಶ ಪಾಲ್ಗೊಂಡಿದ್ದರು.

ತಂಡದ ಕಾರ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್, ಹೆಚ್ಚುವರಿ ವರಿಷ್ಠಾಧಿಕಾರಿ ಎಸ್.ಬದರಿನಾಥ ಶ್ಲಾಘಿಸಿದ್ದಾರೆ.

ಬಂಧಿತ ಆರೋಪಿಗಳು ಬಳಸಿದ ಮೊಬೈಲ್ ಫೋನ್ ಸಂಖ್ಯೆ: 74833 61129 ಹಾಗೂ 96348 75076 – ಇವುಗಳಿಂದ ಮತ್ಯಾರಾದರೂ ಸಾರ್ವಜನಿಕರು ಮೋಸ ಹೋಗಿದ್ದರೆ ಸಿ.ಇ.ಎನ್ ಪೊಲೀಸ್ ಠಾಣೆಯ ದೂರವಾಣಿ
ಸಂಖ್ಯೆಗಳಾದ 94808 05267 ಅಥವಾ 08382 222522 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.