ADVERTISEMENT

ಉಳವಿ ಚೆನ್ನಬಸವೇಶ್ವರ ಜಾತ್ರೆ 12ರಿಂದ

ಮೂರು ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆ: ಚಕ್ಕಡಿ, ಟ್ರ್ಯಾಕ್ಟರ್ ನಿಲುಗಡೆಗೆ ಸ್ಥಳಾವಕಾಶ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 12:05 IST
Last Updated 11 ಫೆಬ್ರುವರಿ 2019, 12:05 IST

ಕಾರವಾರ: ಜೊಯಿಡಾ ತಾಲ್ಲೂಕಿನ ಉಳವಿಯ ಚನ್ನಬಸವೇಶ್ವರ ಜಾತ್ರಾ ಮಹೋತ್ಸವವು ಫೆ.12ರಿಂದ ಒಂಬತ್ತು ದಿನ ನಡೆಯಲಿದೆ. ಫೆ.19ರ ಸಂಜೆ 4ಕ್ಕೆ ಮಹಾರಥೋತ್ಸವ ನೆರವೇರಲಿದೆ ಎಂದು ದೇವಸ್ಥಾನದ ಟ್ರಸ್ಟ್‌ ಅಧ್ಯಕ್ಷ ಗಂಗಾಧರ ಚೆನ್ನಪ್ಪ ಕಿತ್ತೂರ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘12ರಂದು ಬೆಳಿಗ್ಗೆ 7ಕ್ಕೆ ಪಟಸ್ಥಲ ಧ್ವಜಾರೋಹಣ, ಸಂಜೆ ರಥಗಳ ಪೂಜೆ, ಸೀಮೆ ಕಟ್ಟುವುದು, ಮಹಾಪೂಜೆ ನಂತರ ಮಂಗಳಾರತಿಮಾಡಲಾಗುವುದು. 13ರಂದು ಪಲ್ಲಕ್ಕಿ ಉತ್ಸವ, 14ರಂದು ನವಮಿ, ಸಂಜೆ ಭೂಮಿ ಪೂಜೆ, ನವಧಾನ್ಯ ಹಾಕುವುದು, ಪಲ್ಲಕ್ಕಿ ಉತ್ಸವಗಳು ನೆರವೇರಲಿವೆ. 15ರಂದು ಹುಂಡಿಗಳ ಪೂಜೆ, ಉತ್ಸವ ಮೂರ್ತಿ ಪ್ರತಿಷ್ಠಾಪನೆ, ಪಲ್ಲಕ್ಕಿ ಉತ್ಸವವಿದೆ’ ಎಂದು ತಿಳಿಸಿದರು.

16ರಂದು ಪಲ್ಲಕ್ಕಿ ಉತ್ಸವ, ರಕ್ಷಾದೇವಿ ಸಣ್ಣ ರಥೋತ್ಸವ, 17ರಂದು ವೀರಭದ್ರ ದೇವರ ಉತ್ಸದ ಸಣ್ಣ ರಥೋತ್ಸವ, 18ರಂದು ಚತುರ್ದಶಿ ಪಲ್ಲಕ್ಕಿ ಉತ್ಸವ, ರಾತ್ರಿ 8ಕ್ಕೆ ಮಹಾರಥದ ಮೇಲೆ ಚನ್ನಬಸವೇಶ್ವರರ ಉತ್ಸವ ಮೂರ್ತಿ ಪ್ರತಿಷ್ಠಾಪನೆ, ಮಹಾಮಂಗಳಾರತಿ, 19ರಂದು ಸಂಜೆ 4ಕ್ಕೆ ಭರತ ಹುಣ್ಣಿಮೆ ಮಹಾರಥೋತ್ಸವ ನೆರವೇರಲಿದೆ. 20ರಂದು ಬಯಲು ಕುಸ್ತಿ ಪಂದ್ಯಾವಳಿ, 21ರಂದು ಸಂಜೆ ಓಕುಳಿಯೊಂದಿಗೆ ಜಾತ್ರೆಮುಕ್ತಾಯಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಮಹಾರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ್, ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಹಾಂತೇಶ ಕೌಜಲಗಿ, ಅಮೃತ ದೇಸಾಯಿ, ಮಹಾಂತೇಶ ದೊಡಗೌಡ್ರು,ಕಾಂಗ್ರೆಸ್ ಮುಖಂಡ ಪ್ರಶಾಂತ ದೇಶಪಾಂಡೆ ಭಾಗವಹಿಸಲಿದ್ದಾರೆ ಎಂದರು.

ಜಿಲ್ಲಾಧಿಕಾರಿ ಎಸ್.ಎಸ್ ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಅಧಿಕಾರಿ ಮೊಹಮ್ಮದ್ ರೋಶನ್, ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಬಾಸರಕೋಡ, ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ಹಾಜರಿರುವರುಎಂದು ತಿಳಿಸಿದರು.

ಹಲವು ಅಭಿವೃದ್ಧಿ ಕಾಮಗಾರಿ: ಟ್ರಸ್ಟ್ ಉಪಾಧ್ಯಕ್ಷ ಸಂಜಯ ಬಸವರಾಜ ಕಿತ್ತೂರ ಮಾತನಾಡಿ, ‘ದೇವಸ್ಥಾನದ ಸುತ್ತಮುತ್ತ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ₹ 1.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಯಾತ್ರಿ ನಿವಾಸ, ಸಾಲುಮರದ ತಿಮ್ಮಕ್ಕ ಉದ್ಯಾನಗಳು ಉದ್ಘಾಟನೆಯಾಗಿವೆ. ಹೆಲಗೋಡು ಕ್ರಾಸ್‌ನಲ್ಲಿ ಮಹಾದ್ವಾರ ನಿರ್ಮಾಣ ಮಾಡಲಾಗುತ್ತಿದ್ದು, ಮೂರು ತಿಂಗಳ ಒಳಗೆ ಪೂರ್ಣಗೊಳ್ಳಿದೆ’ ಎಂದು ಮಾಹಿತಿ ನೀಡಿದರು.

ಕಡಗರನಿ ಕೆರೆ ಹಾಗೂ ಉಳವಿಯ ಶಿವತೀರ್ಥ ಕೆರೆಗಳ ಹೂಳೆತ್ತುವ ಯೋಜನೆಗೆ ಅನುಮೋದನೆ ಸಿಕ್ಕಿದೆ. ಇದರಿಂದ ನೀರಿನ ಸಮಸ್ಯೆ ಬಗೆಹರಿಯವ ವಿಶ್ವಾಸವಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಶಂಕರಯ್ಯ ಕಲ್ಮಠ, ಕಾರವಾರ ನಗರಸಭೆ ಮಾಜಿ ಅಧ್ಯಕ್ಷ ಗಣಪತಿ ಉಳ್ವೇಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.