ADVERTISEMENT

ಇಂದು ಪಟ್ಟಣ ಪಂಚಾಯ್ತಿ ಮತದಾನ: ಹೊನ್ನಾವರದಲ್ಲಿ ನೀರಿನ ಸಮಸ್ಯೆ, ಲಾಭ ಯಾರಿಗೆ?

ಎಂ.ಜಿ.ಹೆಗಡೆ
Published 29 ಮೇ 2019, 4:07 IST
Last Updated 29 ಮೇ 2019, 4:07 IST
   

ಹೊನ್ನಾವರ:ಪಟ್ಟಣ ಪಂಚಾಯ್ತಿಗೆ ಮೇ 29ರಂದು ಚುನಾವಣೆ ನಡೆಯಲಿದೆ.ಪಟ್ಟಣದ ನೈರ್ಮಲ್ಯ, ಚರಂಡಿ ನಿರ್ಮಾಣಮೊದಲಾದವುಗಳಿಗೆ ಸಂಬಂಧಿಸಿದ ಸಮಸ್ಯೆಗಳ ಜೊತೆಗೆ ನೀರಿನ ತೀವ್ರ ಬವಣೆನಾಗರಿಕರನ್ನುಹೈರಾಣಾಗಿಸಿದೆ.

ಕುಮಟಾ ಹಾಗೂ ಹೊನ್ನಾವರ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸಲು ದಶಕಗಳ ಹಿಂದೆ ಅನುಷ್ಠಾನಕ್ಕೆ ಬಂದಿದ್ದ ಮರಾಕಲ್ ಯೋಜನೆ ಹಲವು ಗೊಂದಲಗಳ ಗೂಡಾಗಿದೆ. ಬೇಸಿಗೆಯ ತೀವ್ರತೆಗೆ ನದಿಯಲ್ಲೇ ನೀರಿನ ಕೊರತೆ ಕಂಡು ಬಂದಿದೆ. ಆದ್ದರಿಂದ ಹೊನ್ನಾವರ ಪಟ್ಟಣದವರೆಗೆ ಪೈಪ್‌ನಲ್ಲಿ ನೀರು ಹರಿಯುತ್ತಿಲ್ಲ. ಸಾರ್ವಜನಿಕ ನಲ್ಲಿಯಲ್ಲಿ ನೀರುಬಾರದೆ ವಾರ ಕಳೆದಿದೆ. ಕೊಳವೆ ಬಾವಿ, ತೆರೆದ ಬಾವಿಗಳ ತಳದಲ್ಲಿ ಜನರು ನೀರು ಹುಡುಕುತ್ತಿದ್ದಾರೆ.

ಇತ್ತ ರಾಜಕೀಯ ನಾಯಕರು ತಮ್ಮ ಹೇಳಿಕೆಗಳ ಮೂಲಕ ಮತದಾರರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಮರಾಕಲ್ ಯೋಜನೆಯ ಗೊಂದಲ ಪರಿಹರಿಸಲು ಹೊನ್ನಾವರ ಪಟ್ಟಣಕ್ಕೆ ಪ್ರತ್ಯೇಕವಾಗಿ ಕುಡಿಯುವ ನೀರು ಪೂರೈಸುವ ಪ್ರಸ್ತಾಪವಿದೆ.ಶರಾವತಿ ಯೋಜನೆಗೆ ಸಂಬಂಧಿಸಿದಂತೆ ರಾಜಕೀಯ ಮೇಲಾಟ ಶುರುವಾಗಿದೆ. ಪ್ರಸ್ತುತ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಮಾಜಿ ಹಾಗೂ ಹಾಲಿ ಶಾಸಕರು ಪರಸ್ಪರ ಮಾತಿನ ಪೈಪೋಟಿ ನಡೆಸುತ್ತಿದ್ದಾರೆ.

ADVERTISEMENT

ಶರಾವತಿ ಕುಡಿಯುವ ನೀರಿನ ಯೋಜನೆಯ ಜಾರಿಗೆ ಅರಣ್ಯ ಇಲಾಖೆಯ ಅನುಮತಿ ಪಡೆಯಲು ಸಾಕಷ್ಟು ಹೆಣಗಾಡಿದ್ದು, ಯೋಜನೆ ಜಾರಿಗೆ ತಾನೇ ಕಾರಣ ಎಂದು ಶಾಸಕ ದಿನಕರ ಶೆಟ್ಟಿ ಹೇಳುತ್ತಾರೆ.

2016ರಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದ ₹ 122 ಕೋಟಿ ವೆಚ್ಚದ ಶರಾವತಿ ಕುಡಿಯುವ ನೀರಿನ ಯೋಜನೆಗೆ ಸಚಿವ ಸಂಪುಟದ ಅನುಮೋದನೆ ದೊರೆಯಿತು. ಮಹತ್ವಾಕಾಂಕ್ಷೆಯ ಈ ಯೋಜನೆಗೆ 2017ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಮಟಾದಲ್ಲಿ ಶಿಲಾನ್ಯಾಸ ಕೂಡ ನೆರವೇರಿಸಿದ್ದರು.

‘ನನ್ನ ಪ್ರಯತ್ನದ ಕೂಸಾದ ಶರಾವತಿ ಕುಡಿಯುವ ನೀರಿನ ಯೋಜನೆಯಲಾಭತೆಗೆದುಕೊಳ್ಳಲು ಶಾಸಕ ದಿನಕರ ಶೆಟ್ಟಿ ಹವಣಿಸುತ್ತಿದ್ದಾರೆ’ ಎಂದು ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರ ಅಸಮಾಧಾನವಾಗಿದೆ.

‘ನಾಗರಿಕರು ಸುಶಿಕ್ಷಿತರಿದ್ದು, ಯೋಜನೆ ಜಾರಿಯ ಹಿಂದೆ ಯಾರ ಪ್ರಯತ್ನವಿದೆ ಎಂಬುದರ ಅರಿವಿದೆ. ಯೋಗ್ಯರಿಗೆ ಮತದಾನ ಮಾಡುತ್ತೇವೆ. ಯೋಜನೆ ಶೀಘ್ರವಾಗಿ ಅನುಷ್ಠಾನಕ್ಕೆ ಬರುವಂತೆ ಮಾಡಿ ನಮ್ಮ ನೀರಿನ ಸಮಸ್ಯೆ ಬಗೆಹರಿಸುವುದು ಪಟ್ಟಣ ಪಂಚಾಯ್ತಿ ಸದಸ್ಯರಾಗಿ ನಾವು ಆಯ್ಕೆ ಮಾಡುವ ಪ್ರತಿನಿಧಿಗಳ ಜವಾಬ್ದಾರಿ’ ಎಂದು ಪ್ರಭಾತನಗರದ ನಿವಾಸಿಯೊಬ್ಬರು ಪ್ರತಿಕ್ರಿಯಿಸಿದರು.

‘ಪಕ್ಷವೇನಿದ್ದರೂ ವಿಧಾನಸಭೆ, ಲೋಕಸಭೆ ಚುನಾವಣೆಗಳಿಗೆ ಸೀಮಿತ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಭ್ಯರ್ಥಿಯ ವರ್ಚಸ್ಸು ಮುಖ್ಯವಾಗುತ್ತದೆ. ಸಾಮಾಜಿಕ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ ವ್ಯಕ್ತಿಗೆ ಮತ ನೀಡುತ್ತೇವೆ’ ಎಂದು ಕಮಟೆಹಿತ್ಲ ನಿವಾಸಿ ನಾರಾಯಣ ಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.