ಶಿರಸಿ:ಜೆಕ್ ಗಣರಾಜ್ಯದಿಂದ ಶಿರಸಿಗೆ ಬಂದು ದಂಪತಿ ಮತ ಚಲಾಯಿಸಿದರು.
ವಿಜ್ಞಾನಿಗಳಾಗಿ ಕಾರ್ಯನಿರ್ವಹಿಸುತ್ತಿರುವಸೌಮ್ಯಾ ಮತ್ತು ವಿನೀತ್ ಮತ ಚಲಾಯಿಸಿದರು. ಸೌಮ್ಯ ಶಿರಸಿಯಲ್ಲಿ ಹಾಗೂ ವಿನೀತ್ ಹರಿಹರದಲ್ಲಿ ಮತ ಹಾಕಿದರು.
ಮತ ಚಲಾಯಿಸುವುದು ನಮ್ಮ ಹಕ್ಕು. ಮತದಾನದಿಂದ ನಾವು ಭಾರತೀಯರು ಎಂಬ ಹೆಮ್ಮೆ ಮೂಡುತ್ತದೆ. ಮತ ಹಾಕಿದರೆ ಮಾತ್ರ ನಾವು ಜನಪ್ರತಿನಿಧಿಗಳನ್ನು ಪ್ರಶ್ನಿಸಹುದು.
ಲಕ್ಷ ಹಣ ಖರ್ಚಾದರೂ ತೊಂದರೆಯಿಲ್ಲ, ಮತ ಹಾಕಬೇಕು ಅಂತ ಬಂದಿದ್ದೇವೆ ಎಂದು ಸೌಮ್ಯಾ ಹೇಳಿದರು.
ಅನಂತಕುಮಾರ್ ಹೆಗಡೆ ಮತದಾನ
ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಪತ್ನಿ ಶ್ರೀರೂಪಾ ಜತೆ ಬಂದು ಭೂಮಾ ಪ್ರೌಢಶಾಲೆಯ 67ನೇ ಕ್ರಮಾಂಕದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಉತ್ತರ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ದಾಖಲೆಯ ಮತದೊಂದಿಗೆ ಗೆಲುವು ಸಾಧಿಸಲಿದೆ. ಹಿಂದೆಲ್ಲ ಹಣ, ಆಮಿಷಕ್ಕೆ ಚುನಾವಣೆ ನಡೆಯುತ್ತಿತ್ತು. ಈ ಬಾರಿ ದೇಶಕ್ಕಾಗಿ ಚುನಾವಣೆ ನಡೆಯುತ್ತಿದೆ. ಜನರೇ ಉತ್ಸಾಹದಿಂದ ಬಂದು ಮತ ಚಲಾಯಿಸುತ್ತಿದ್ದಾರೆ ಎಂದು ಅವರು ಪ್ರತಿಕ್ರಿಯಿಸಿದರು.
ಹುಬ್ಬಳ್ಳಿ ಮತದಾನಕ್ಕೆ ಭಾರಿ ಉತ್ಸಾಹ
ಹುಬ್ಬಳ್ಳಿ: ವಾಣಿಜ್ಯ ನಗರ ಹುಬ್ಬಳ್ಳಿಯ ಭವಾನಿನಗರದ ಬೂತ್ ಸಂಖ್ಯೆ 109 ಮತ್ತು 113ರಲ್ಲಿ ಮತದಾನಕ್ಕೆ ಜನರು ಸಾಲುಗಟ್ಟಿ ನಿಂತಿದ್ದಾರೆ.
ಮತದಾನ ಆರಂಭಕ್ಕೂ ಮೊದಲೇ ಜನರು ಮೊದಲ ಮತದಾನ ಮಾಡಬೇಕೆಂಬ ಉತ್ಸಾಹದಿಂದ ಬಂದು ನಿಂತಿದ್ದರು. ಬಿಸಿಲು ಸಹ ಹೆಚ್ಚಾಗಿರುವುದರಿಂದ ಝಳ ಏರುವ ಮೊದಲೇ ಮತದಾನ ಮಾಡಲು ಬಂದಿರುವುದಾಗಿ ಮತದಾರರು ಪ್ರತಿಕ್ರಿಯಿಸಿದರು.
ಸಂಸದ ಪ್ರಹ್ಲಾದ ಜೋಶಿ ಅವರು ಇಲ್ಲಿ ಮತದಾನ ಮಾಡಲಿದ್ದಾರೆ.
ವಿಶೇಷ ಅಲಂಕಾರ
ಕಲಬುರ್ಗಿ: ಚಿತ್ತಾಪುರ ತಾಲ್ಲೂಕು ದಂಡೋತಿಯ ಮತಗಟ್ಟೆ ಸಂಖ್ಯೆ 42ರಲ್ಲಿ ಅಂಗವಿಕಲ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಮತಗಟ್ಟೆಯನ್ನು ವಿಶೇಷವಾಗಿ ಅಲಂಕರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.