ಮುಂಡಗೋಡ: ‘ಕನ್ನಡ ಭಾಷೆ ನಮಗೆ ಅನ್ನ ನೀಡಿದೆ. ಕನ್ನಡ ನಮ್ಮೆಲ್ಲರಿಗೆ ಬದುಕಲು ಆಶ್ರಯ ನೀಡಿದೆ. ಹಾಗಾಗಿ ಕನ್ನಡ ಬೆಳೆಸುವ ದೊಡ್ಡ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಪಾಟೀಲ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ತಾಲ್ಲೂಕು ಘಟಕದ ಆಶ್ರಯದಲ್ಲಿ ಇಲ್ಲಿನ ನಿವೃತ್ತ ನೌಕರರ ಸಭಾಭವನದಲ್ಲಿ ಶನಿವಾರ ನಡೆದ, 2024-25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಸಂಸಾರ ನಡೆಸುವಲ್ಲಿ ಹಾಗೂ ಶಿಕ್ಷಣ ನೀಡುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರದ ಜೊತೆಗೆ ಶಿಕ್ಷಣ ಕೊಡಿಸುವುದರತ್ತ ಗಮನಹರಿಸಬೇಕು. ಮಕ್ಕಳು ಮೊಬೈಲ್ ಬಳಕೆಯ ಗೀಳು ಹಚ್ಚಿಕೊಂಡಿದ್ದು, ಇದರ ಬಗ್ಗೆ ಪಾಲಕರು ಹೆಚ್ಚಿನ ನಿಗಾ ವಹಿಸಬೇಕು’ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ, ‘ವಿದ್ಯಾರ್ಥಿಗಳು ಬರೆಯುವ ಹಾಗೂ ತಿಳಿದುಕೊಳ್ಳುವ ಹವ್ಯಾಸ ರೂಢಿಸಿಕೊಳ್ಳಬೇಕು. ಕನ್ನಡ ಭಾಷೆಯ ಮೇಲಿನ ಪ್ರೀತಿ, ಗೌರವ ಮನೆ ಹಾಗೂ ಮನದಲ್ಲಿ ಇರಬೇಕು. ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವುದಕ್ಕಾಗಿ, ಶಿಕ್ಷಕರ ಶ್ರಮ ಕಡೆಗಣಿಸಲಾಗದು. ವಿದ್ಯಾರ್ಥಿ ಹಾಗೂ ಶಿಕ್ಷಕರು ಕನ್ನಡ ನಾಡಿಗೆ ಮಹತ್ತರ ಕೊಡುಗೆ ನೀಡುವುದು ಮುಂದುವರಿಯಲಿ’ ಎಂದು ತಿಳಿಸಿದರು.
ಶಿರಸಿ ಶೈಕ್ಷಣಿಕ ಜಿಲ್ಲಾ ಮುಖ್ಯಶಿಕ್ಷಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಡಿ.ಮುಡೆಣ್ಣವರ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ವಸಂತ ಕೊಣಸಾಲಿ ಮಾತನಾಡಿದರು.
ರಮೇಶ ಅಂಬಿಗೇರ, ವಿನಾಯಕ ಶೇಟ್, ಶ್ರೀಮಂತ ಮದರಿ, ಸುಭಾಷ್ ಡೋರಿ, ನಾಗರಾಜ ನಾಯ್ಕ, ಎಸ್.ಕೆ.ಬೋರ್ಕರ್, ಎಸ್.ಬಿ.ಹೂಗಾರ, ಸಂಗಪ್ಪ ಕೋಳೂರು, ಗೌರಮ್ಮ ಕೊಳ್ಳಾನವರ, ಮಲ್ಲಮ್ಮ ನೀರಲಗಿ, ಕರಿಯಪ್ಪ ಹರಿಜನ, ಸದ್ಗುರು ಭಟ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.