ಕಾರವಾರ: ಅಂಕೋಲಾ ತಾಲ್ಲೂಕಿನ ಬೆಳಂಬಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಾಡಿಬೊಗ್ರಿ ಭಾಗದ ರಸ್ತೆಯಲ್ಲಿ ಮಳೆ ನೀರು ನಿಲ್ಲುತ್ತಿದೆ. ಇದರಿಂದಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಸಿಮೆಂಟ್ ರಸ್ತೆ ನಿರ್ಮಾಣ ಆದಾಗಿನಿಂದ ಪ್ರತಿವರ್ಷವೂ ಈ ಸಮಸ್ಯೆ ಎದುರಾಗುತ್ತಿದ್ದು, ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಈ ಭಾಗದಲ್ಲಿ ಜೋರು ಮಳೆಗೆ ಮೇಲಿನ ಜಮೀನುಗಳಿಂದ ಹರಿದು ಬರುವ ನೀರು, ಇಲ್ಲಿರುವ ಒಂದೇ ಮೋರಿಯಿಂದ ಕೆಳಭಾಗದ ಜಮೀನುಗಳಿಗೆ ಹರಿಯುತ್ತದೆ. ಇತರ ಓಣಿಗಳಿಂದಲೂ ಹರಿದು ಬರುವ ನೀರು ಕೂಡ ಇಲ್ಲೇ ಸಂಗಮವಾಗುತ್ತಿದೆ. ಹಾಗಾಗಿ ನೀರು ವೇಗವಾಗಿ ಹರಿಯದೇ ರಸ್ತೆಯಲ್ಲೇನಿಲ್ಲುತ್ತಿದೆ.
ಕೆಲವು ದಿನಗಳ ಹಿಂದೆ ಗ್ರಾಮ ಪಂಚಾಯ್ತಿಯವರು ಕೆಳಭಾಗದ ರಸ್ತೆಯಂಚಿಗೆ ಕಟ್ಟಿದ ಮಣ್ಣನ್ನುತೆರವು ಮಾಡಿದ್ದರು.ಆದರೆ ಪುನಃ ಯಾರೋ ಮಣ್ಣು ಸುರಿದಿದ್ದಾರೆ.ಇದೇ ಭಾಗದಲ್ಲಿರಸ್ತೆಯಂಚಿನ ಮನೆಯೊಂದರ ಪಾಗಾರ ಬುಧವಾರ ಕುಸಿದಿದೆ. ನೀರಿನೊಡನೆ ಹರಿದು ಬಂದ ಮಣ್ಣು, ಕಸ ಕಡ್ಡಿ ರಸ್ತೆಯಲ್ಲಿ ಶೇಖರಣೆಯಾಗುತ್ತಿದೆ. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ಅಪಾಯವಾಗುವ ಸಾಧ್ಯತೆಯಿದೆ.
ಅಲ್ಲದೇ ಶಾಲಾ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಆದ್ದರಿಂದ ಶಾಲೆ ಪ್ರಾರಂಭವಾಗುವ ಮೊದಲೇ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಗ್ರಾಮಸ್ಥರು ಗ್ರಾಮ ಪಂಚಾಯ್ತಿಯನ್ನು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.