
ಕಾರವಾರ: ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಗೊಳ್ಳಬೇಕಿರುವ ಪ್ರದೇಶಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸದಸ್ಯರಾದ ಎಚ್.ಎಸ್.ಸಿಂಗ್ ಮತ್ತು ಆರ್.ಸುಕುಮಾರ್ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಐಜಿಎಫ್ ಶಿವಕುಮಾರ ಸಿ.ಎಂ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಅವರನ್ನು ಭೇಟಿಯಾದ ಸ್ಥಳೀಯರು, ಯೋಜನೆಗೆ ಅನುಮತಿ ನೀಡದಂತೆ ಕೋರಿದರು.
ತಂಡದ ಸದಸ್ಯರು ಭಾನುವಾರ ಬೇಗೋಡಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಗೇರುಸೊಪ್ಪದ ಸಿಂಗಳಿಕ ಉದ್ಯಾನದಲ್ಲಿ ಜನರ ಜೊತೆ ಚರ್ಚಿಸಿದರು. ಶಾಸಕ ದಿನಕರ ಶೆಟ್ಟಿ, ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ, ಶರಾವತಿ ಕೊಳ್ಳ ಉಳಿಸಿ ಹೋರಾಟ ಸಮಿತಿಯ ಚಂದ್ರಕಾಂತ ಕೋಚರೇಕರ್, ಸ್ಥಳೀಯರು ವನ್ಯಜೀವಿ ಹಾಗೂ ಪರಿಸರಕ್ಕೆ ಉಂಟಾಗುವ ಹಾನಿಯ ಕುರಿತು ವಿವರಿಸಿ ಲಿಖಿತ ಮನವಿ ಸಲ್ಲಿಸಿದರು.
ತಜ್ಞರ ತಂಡ ಸಾಗರದಲ್ಲಿ ನಡೆಸಿದ ಸಭೆಯಲ್ಲಿ ಮಾತನಾಡಿದ ಜೀವವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ‘ಕೇಂದ್ರ ತಂಡ ಶರಾವತಿ ಕಣಿವೆ ಅಧ್ಯಯನ ವರದಿ ಹಾಗೂ ರಾಜ್ಯ ಸರ್ಕಾರವೇ ನಡೆಸಿದ ಭೂಕುಸಿತ ಅಧ್ಯಯನ ಸಮೀತಿ ವರದಿ ಪರಿಶೀಲಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.