ADVERTISEMENT

ಭಜ್ಜಿಯಿಂದ ಬದುಕು ರೂಪಿಸಿಕೊಂಡ ದಿಟ್ಟೆ

ಹಳಿಯಾಳದಲ್ಲಿ 12 ವರ್ಷಗಳಿಂದ ಗೂಡಂಗಡಿ ನಡೆಸುತ್ತಿರುವ ರತ್ನಾ ಚಲವಾದಿ

ಸಂತೋಷ ಹಬ್ಬು
Published 7 ಮಾರ್ಚ್ 2020, 15:18 IST
Last Updated 7 ಮಾರ್ಚ್ 2020, 15:18 IST
ಹಳಿಯಾಳದಲ್ಲಿ ಮಿರ್ಚಿ ಭಜ್ಜಿ ತಯಾರಿಸುತ್ತಿರುವ ರತ್ನಾ ಚಲವಾದಿ
ಹಳಿಯಾಳದಲ್ಲಿ ಮಿರ್ಚಿ ಭಜ್ಜಿ ತಯಾರಿಸುತ್ತಿರುವ ರತ್ನಾ ಚಲವಾದಿ   

ಹಳಿಯಾಳ: ‘ಮಹಿಳೆಯೊಬ್ಬಳು ಆತ್ಮವಿಶ್ವಾಸದಿಂದ ತನ್ನಜೀವನದ ಬಗ್ಗೆಸ್ವಯಂ ನಿರ್ಧಾರ ತೆಗೆದುಕೊಂಡರೆ ಮಹಿಳಾ ಸಬಲೀಕರಣಕ್ಕೆ ಅರ್ಥ ದೊರೆತಂತೆ...’

ಇದುಪಟ್ಟಣದ ಪುರಸಭೆ ಕಚೇರಿ ಬಳಿಯ ಪಾದಚಾರಿ ಮಾರ್ಗದ ಸಮೀಪ 12 ವರ್ಷಗಳಿಂದ ಚಹಾ ಅಂಗಡಿ ಇಟ್ಟು ಸ್ವಾವಲಂಬಿ ಜೀವನ ಸಾಗಿಸುತ್ತಿರುವರತ್ನಾ ಚಲವಾದಿಯ ದೃಢವಾದ ಮಾತು.

ಚಹಾ, ಮಿರ್ಚಿ ಭಜ್ಜಿ, ಗಿರ್ಮಿಟ್‌ನಂತಹ ಖಾದ್ಯಗಳನ್ನು ತಯಾರಿಸುವ ಅವರಿಗೆ,ಅದರ ಮಾರಾಟದಿಂದ ಬರುವ ಆದಾಯವೇ ಜೀವನಾಧಾರ.ಪುಟ್ಟ ತಾಡಪತ್ರಿ ಹೊದಿಕೆ ಹೊಂದಿರುವ ಚಾವಣಿ ಮಾಡಿ ಅದರಲ್ಲಿ ತನ್ನ ತಳ್ಳುಗಾಡಿ ತಂದಿಟ್ಟುಕೊಂಡಿದ್ದಾರೆ. ಪ್ರತಿದಿನ ಅಂಗಡಿ ತೆರೆದು ಖಾದ್ಯಗಳ ಮಾರಾಟವಾದರೆ ಮಾತ್ರ ಅಂದಿನ ದಿನ ಸಾಗುತ್ತದೆ

ADVERTISEMENT

‘ಕೆಲವರುಭಜ್ಜಿ,ಚಹಾ ಸೇವಿಸಿದ ನಂತರ ಪ್ರಾಮಾಣಿಕವಾಗಿ ಹಣವನ್ನು ಪಾವತಿಸುತ್ತಾರೆ. ಆದರೆ ಕೆಲವರು ಪಾವತಿಸದೇ ತೆರಳುತ್ತಾರೆ. ಪದೇ ಪದೇ ಕಾಡಿ ಬೇಡಿ ವಸೂಲಿ ಮಾಡಬೇಕಾಗುತ್ತದೆ’ ಎಂದು ಗದ್ಗದಿತರಾದರು.

‘ಶಾಸಕ ಆರ್.ವಿ.ದೇಶಪಾಂಡೆ ಸಚಿವರಾಗಿದ್ದಾಗ ಒಂದೆರಡು ಬಾರಿ ನಮ್ಮ ಗೂಡಂಗಡಿಗೆ ಭೇಟಿ ನೀಡಿ ಮಿರ್ಚಿ ಭಜ್ಜಿ, ಚುರುಮುರಿ ಸೇವಿಸಿದ್ದರು. ಅಂದು ನನ್ನ ಪರಿಸ್ಥಿತಿಯನ್ನು ಅರಿತು ಆಶ್ರಯ ಯೋಜನೆಯಲ್ಲಿಮನೆ ಮಂಜೂರು ಮಾಡಿದರು.ಹಾಗಾಗಿ ತಲೆ ಮೇಲೊಂದು ಸೂರಿದೆ. ಪುಟ್‌ಪಾತ್‌ನಿಂದ ಅಂಗಡಿಯನ್ನು ಯಾವಾಗ ತೆರವು ಮಾಡಿಸುತ್ತಾರೋ ಎಂಬ ಆತಂಕ ಸದಾ ಕಾಡುತ್ತಿರುತ್ತದೆ. ಅಂಗಡಿ ಬಾಡಿಗೆ ಪಡೆಯಲು ಲಕ್ಷಾಂತರ ರೂಪಾಯಿ ಮುಂಗಡ ಹಣ ಪಾವತಿಸಬೇಕು. ತಿಂಗಳಿಗೆ ಸಾವಿರಾರು ರೂಪಾಯಿ ಬಾಡಿಗೆ ಹಣವನ್ನೆಲ್ಲಿಂದ ತರಲಿ’ ಎಂದು ಪ್ರಶ್ನಿಸುತ್ತಾರೆ.

‘ಸಮಾಜದ ಮುಖ್ಯ ಕ್ಷೇತ್ರಗಳನ್ನು ಹೊರತಾಗಿ ಕೆಳ ಮಧ್ಯಮ ವರ್ಗದ ಮಹಿಳೆಯರಿಗೆ ಸಬಲೀಕರಣದ ಅಗತ್ಯವಿದೆ. ಮಹಿಳೆಸ್ವಂತ ಮುನ್ನಡೆಯುವ ಪರಿಸ್ಥಿತಿಯು ಸಮಾಜದಲ್ಲಿ ಸೃಷ್ಟಿಯಾಗಬೇಕು’ ಎಂದು ಆಶಯ ವ್ಯಕ್ತಪಡಿಸುತ್ತಾರೆ.

ಮಕ್ಕಳಿಗೆ ಶಿಕ್ಷಣದ ಬೆಳಕು:‘ಇಬ್ಬರುಮಕ್ಕಳು ಹಾಗೂ ತಾಯಿಯನ್ನು ನೋಡಿಕೊಳ್ಳಬೇಕು.ಇಂಥ ಸಂದಿಗ್ಧ ಸ್ಥಿತಿಯಲ್ಲೇ ಒಬ್ಬ ಮಗನಿಗೆ ಎಂ.ಬಿ.ಎ ಪದವಿ ಶಿಕ್ಷಣ ಕೊಡಿಸಿದ್ದೇನೆ. ಮತ್ತೊಬ್ಬನಿಗೂ ಚೆನ್ನಾಗಿ ಶಿಕ್ಷಣ ನೀಡುತ್ತಿದ್ದೇನೆ.ಅಂಗಡಿ ಆರಂಭಿಸಿದ ಆರಂಭದಲ್ಲಿಬಹಳಷ್ಡು ನಿಂದನೆ, ಆರ್ಥಿಕ ತೊಂದರೆಗೆ ಒಳಗಾದೆ. ಆದರೂ ಎದೆಗುಂದದೆ ಕಷ್ಟ, ನೋವುಗಳ ಮಧ್ಯೆಯೇಛಲದಿಂದ ಮುಂದುವರಿಸಿದೆ’ ಎಂದು ರತ್ನಾ ಮುಗುಳ್ನಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.