ಮುಂಡಗೋಡ: ‘ಡೆಂಗಿ ಜ್ವರ ಹಾಗೂ ಕೋವಿಡ್ 19 ಸೋಂಕು ಖಚಿತಗೊಂಡಿದ್ದ ಪಟ್ಟಣದ 20 ವರ್ಷದ ಯುವಕನ ಗಂಟಲು ದ್ರವದ ವರದಿಯು ಶನಿವಾರ, ನೆಗೆಟಿವ್ ಬಂದಿದೆ’ ಎಂದು ತಹಶೀಲ್ದಾರ್ ಶ್ರೀಧರ ಮುಂದಲಮನಿ ಹೇಳಿದರು.
ಯಾವುದೇ ಪ್ರಯಾಣ ಹಿನ್ನೆಲೆ ಹೊಂದಿರದ ಯುವಕನಲ್ಲಿ ಕಳೆದ ಸೋಮವಾರ ‘ಡೆಂಗಿ’ ದೃಢಗೊಂಡಿತ್ತು. ಅಲ್ಲದೇ ಕೋವಿಡ್ ವರದಿಯಲ್ಲಿ ಒಂದು ಸಲ ಪಾಸಿಟಿವ್, ಮತ್ತೊಂದು ಸಲ ನೆಗೆಟಿವ್ ಬಂದಿತ್ತು. ಇದರಿಂದ ಅಧಿಕಾರಿಗಳು ಗೊಂದಲಕ್ಕೆ ಒಳಗಾಗಿದ್ದರು.
ಕೋವಿಡ್ ಸೋಂಕು ಸಮುದಾಯಕ್ಕೆ ಹರಡಿರುವ ಸಾಧ್ಯತೆಯಿಲ್ಲ. ಅಲ್ಲದೇ ಯುವಕ ಸೋಂಕಿತರ ಸಂಪರ್ಕಕ್ಕೂ ಬಂದಿಲ್ಲ. ಹೀಗಾಗಿ ಯುವಕನ ಮಾದರಿಯನ್ನು ಬೆಂಗಳೂರಿಗೆ ಕಳಿಸಿ, ವರದಿ ಬರುವರೆಗೂ ಇಲ್ಲಿನ ತಾಲ್ಲೂಕುಆಸ್ಪತ್ರೆಯ ಐಸೋಲೇಶನ್ ವಾರ್ಡ್ನಲ್ಲಿಯೇ ಚಿಕಿತ್ಸೆ ನೀಡಲು ನಿರ್ಧರಿಸಿದ್ದರು.
ಯುವಕನಲ್ಲಿ ಸೋಂಕು ಖಚಿತ ಎಂದು ವರದಿ ಬಂದ ಕಾರಣ ಪಟ್ಟಣವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿತ್ತು. ತಹಶೀಲ್ದಾರ್ ಹಾಗೂ ಆರೋಗ್ಯ ಅಧಿಕಾರಿಗಳು, ತಜ್ಞವೈದ್ಯರ ಸಲಹೆ ಪಡೆದು, ಗಂಟಲುದ್ರವದ ಮಾದರಿಯನ್ನು ಮತ್ತೊಂದು ಸಲ ಬೆಂಗಳೂರಿಗೆ ಪರೀಕ್ಷೆಗಾಗಿ ಕಳುಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.