
ಹೊಸಪೇಟೆ (ವಿಜಯನಗರ): ‘ವಿದ್ಯಾರ್ಥಿಗಳಲ್ಲಿ ಅಗಾಧ ಸಾಮರ್ಥ್ಯ ಇದ್ದು, ಅವರಿಗೆ ಸರಿಯಾದ ದಿಕ್ಕು ತೋರಿಸುವ ಕೆಲಸವನ್ನು ಪೋಷಕರು, ಶಿಕ್ಷಕರು, ಹಿರಿಯರು ಮಾಡಬೇಕು’ ಎಂದು ಪೊಲೀಸ್ ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೆಶಕ (ಎಡಿಜಿಪಿ) ಬಿ. ದಯಾನಂದ ಹೇಳಿದರು.
ಇಲ್ಲಿ ಭಾನುವಾರ ನಡೆದ ವಾಲ್ಮೀಕಿ ನಾಯಕ ಪದವೀಧರ ವಿದ್ಯಾವರ್ಧಕ ಸಂಘದ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನ ವಿತರಿಸಿ ಅವರು ಮಾತನಾಡಿದರು.
‘ಮಕ್ಕಳ ಶಿಕ್ಷಣಕ್ಕೆ ಪೂರಕವಾದ ಪರಿಸರ ನಿರ್ಮಿಸಿ, ಆರ್ಥಿಕ ದುರ್ಬಲರಿಗೆ ನೆರವು ನೀಡಿದರೆ ಅವರು ತಮ್ಮ ಗುರಿಯತ್ತ ಸಾಗುತ್ತಾರೆ. ಕಲೆ, ಕ್ರೀಡೆ ಸೇರಿದಂತೆ ಇತರೆ ಕ್ಷೇತ್ರಗಳತ್ತಲೂ ಮಕ್ಕಳು ಗಮನಹರಿಸಬೇಕು. ಮಕ್ಕಳ ಅಭಿಲಾಷೆ ತಕ್ಕಂತೆ ಪೋಷಕರು ಅವಕಾಶ ಕಲ್ಪಿಸಿಕೊಡಬೇಕು. ಇದು ಅವರ ಸಾಧನೆಗೆ ಮೆಟ್ಟಿಲಾಗುತ್ತದೆ’ ಎಂದರು.
ಚನ್ನಗಿರಿ ಮಾವನಿಕಟ್ಟೆ ಶಾಂತಿಸಾಗರ ವಲಯದ ಆರ್ಎಫ್ಒ ಉಷಾ ಮಾತನಾಡಿ, ‘ವಿದ್ಯಾರ್ಥಿಗಳು ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. ಗುರಿ ಸಾಧಿಸಲು ಸತತ ಪ್ರಯತ್ನ ನಡೆಸಬೇಕು’ ಎಂದರು.
ಡಿವೈಎಸ್ಪಿ ಟಿ. ಮಂಜುನಾಥ್, ನಗರಸಭೆ ಪೌರಾಯುಕ್ತ ಎ. ಶಿವಕುಮಾರ್, ವಾಲ್ಮೀಕಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಗೋಸಲ ಭರಮಪ್ಪ, ಗುಂಡಿ ಮಾರುತಿ ಮಾತನಾಡಿದರು. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಕೆ. ರವಿಕುಮಾರ ಇದ್ದರು.
ಸನ್ಮಾನ: ರಂಗಭೂಮಿ ಕಲಾವಿದೆ ಕೆ. ನಾಗರತ್ನಮ್ಮ, ಚಿತ್ರ ಕಲಾವಿದ ಬಾಣದ ಮಾರುತಿ, ಎಂಜಿನಿಯರ್ ಸತೀಶ್ ಮತ್ತು ಪತ್ರಕರ್ತ ಕೆ.ಲಕ್ಷ್ಮಣ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.