ADVERTISEMENT

ಹಗರಿಬೊಮ್ಮನಹಳ್ಳಿ: ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸಕಲ ಸಿದ್ಧತೆ

ಪಶ್ಚಿಮ ತಾಲ್ಲೂಕುಗಳ ರೈತರಲ್ಲಿ ಮನೆ ಮಾಡಿದ ಸಂತಸ

ಸಿ.ಶಿವಾನಂದ
Published 3 ಜೂನ್ 2025, 6:50 IST
Last Updated 3 ಜೂನ್ 2025, 6:50 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೆಚ್ಚಿನಬಂಡಿ ಗ್ರಾಮದಲ್ಲಿ ಬಂಗಾರು ಸಕ್ಕರೆ ಕಾರ್ಖಾನೆ ನಿರ್ಮಿಸಲು ಉದ್ಧೇಶಿತ ಸ್ಥಳ
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೆಚ್ಚಿನಬಂಡಿ ಗ್ರಾಮದಲ್ಲಿ ಬಂಗಾರು ಸಕ್ಕರೆ ಕಾರ್ಖಾನೆ ನಿರ್ಮಿಸಲು ಉದ್ಧೇಶಿತ ಸ್ಥಳ   

ಹಗರಿಬೊಮ್ಮನಹಳ್ಳಿ: ವಿಜಯನಗರ ಜಿಲ್ಲೆಯಲ್ಲಿ ಭೌಗೋಳಿಕವಾಗಿ ಮಧ್ಯ ಪ್ರದೇಶವಾದ ತಾಲ್ಲೂಕಿನ ಕೆಚ್ಚಿನಬಂಡಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದಕ್ಕೆ ಭಾರಿ ಸಿದ್ಧತೆ ನಡೆದಿದೆ. ಇದರಿಂದಾಗಿ ಈ ಭಾಗದ ಪಶ್ಚಿಮ ತಾಲ್ಲೂಕುಗಳ ರೈತರಲ್ಲಿ ಸಂತಸ ಮನೆ ಮಾಡಿದೆ.

ತಾಲ್ಲೂಕಿನಲ್ಲಿ 1249.64 ಹೆಕ್ಟೇರ್ ಕಬ್ಬು ಬೆಳೆಯಲಾಗಿದೆ. ಕೊಳವೆಬಾವಿ ಅವಲಂಬಿತ ಕೃಷಿಯಲ್ಲಿ ಕಬ್ಬು ಬೆಳೆಯುತ್ತಿದ್ದು, ನೀರಿನ ಲಭ್ಯತೆ ಮೇಲೆ ಬೆಳೆ ವಿಸ್ತೀರ್ಣದಲ್ಲಿ ವ್ಯತ್ಯಾಸವಾಗುತ್ತದೆ. ಕಾರ್ಖಾನೆ ನಿರ್ಮಾಣ ಉದ್ದೇಶಿತ ಪ್ರದೇಶ ಹಂಪಸಾಗರ ಮತ್ತು ತಂಬ್ರಹಳ್ಳಿ ಹೋಬಳಿಗಳಿಂದ 20 ಕಿ.ಮೀ. ಅಂತರದಲ್ಲಿದೆ. ಇದುವರೆಗೂ ತಾಲ್ಲೂಕಿನ ರೈತರು ದುಗ್ಗಾವತಿ, ಮೈಲಾರ ಮತ್ತು ಮುಂಡರಗಿ ಬಳಿ ಇರುವ ಕಾರ್ಖಾನೆಯನ್ನು ಅವಲಂಬಿಸಿದ್ದು, ಸಾಗಣೆ ವೆಚ್ಚ ಹೊರೆಯಾಗಿತ್ತು. ತಾಲ್ಲೂಕಿನಲ್ಲಿ ಕಾರ್ಖಾನೆ ಸ್ಥಾಪನೆಯಾದಲ್ಲಿ ಪಶ್ಚಿಮ ತಾಲ್ಲೂಕುಗಳ ರೈತರಿಗೆ ಅನುಕೂಲವಾಗಲಿದೆ.

ಮೆ.ಕರ್ನಾಟಕ ಬಂಗಾರು ಶುಗರ್ಸ್ ಪ್ರೈವೇಟ್ ಲಿಮಿಟೆಡ್‍ನಿಂದ ಕಾರ್ಖಾನೆ ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು ಖರೀದಿಸಿದೆ. ಈ ಕುರಿತಂತೆ ಸರ್ಕಾರಕ್ಕೆ ಫೆ.22 ಮತ್ತು ಮೇ 20, 2024 ರಂದು ಪ್ರಸ್ತಾವ ಸಲ್ಲಿಸಲಾಗಿದೆ. ಈಗಾಗಲೇ ತಾಲ್ಲೂಕಿನ ತಹಶೀಲ್ದಾರ್, ಪಿಡಬ್ಲ್ಯೂಡಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಂಟಿಯಾಗಿ ಸರ್ವೇಮಾಡಿ ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ.

ADVERTISEMENT

ಈ ಕುರಿತು ಸರ್ವೇ ಆಫ್ ಇಂಡಿಯಾದ ನಿರ್ದೇಕರು ನೀಡಿರುವ ವರದಿಯನ್ನಾಧರಿಸಿ ಅಂತರ ಪ್ರಮಾಣ ಪತ್ರ ನೀಡಲು ಹಾಗೂ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಕೋರಿ ಆಯಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕಾರ್ಯದರ್ಶಿಗೆ 2025ರ ಮೆ 21ರಂದು  ಪತ್ರ ಬರೆದಿದ್ದಾರೆ.

ಕಾರ್ಖಾನೆಯ ಸಂಪರ್ಕಕ್ಕೆ ಅಗತ್ಯವಾದ ಮೂರು ರಸ್ತೆಗಳನ್ನು ಈಗಾಗಲೇ ಗುರುತಿಸಲಾಗಿದೆ. ಹೊಸಪೇಟೆ– ಶಿವಮೊಗ್ಗ ಹೆದ್ದಾರಿ, ಆನೇಕಲ್ಲು- ಹಂಪಾಪಟ್ಟಣ, ಕೆಚ್ಚಿನಬಂಡಿ- ಹಲಗಾಪುರ ರಸ್ತೆಗಳು ಸಂಪರ್ಕ ಕಲ್ಪಿಸುತ್ತವೆ.

ಕಾರ್ಖಾನೆ ಉದ್ದೇಶಿತ ಸ್ಥಳದ ಜಮೀನುಗಳ ಪಕ್ಕದಲ್ಲಿಯೇ ಪರಿಶಿಷ್ಟ ಜಾತಿಯ ರೈತರ ಜಮೀನುಗಳಿವೆ. ಬದುಕು ಕಟ್ಟಿಕೊಳ್ಳಲು ಜಮೀನು ಆಸರೆಯಾಗಿದ್ದು, ಯಾವುದೇ ಕಾರಣಕ್ಕೂ ಭೂಮಿ ಸ್ವಾಧೀನ ಪಡಿಸಿಕೊಳ್ಳಬಾರದು ಎನ್ನುವುದು ಪರಿಶಿಷ್ಟ ಜಾತಿಯ ರೈತರ ಒತ್ತಾಯವೂ ಇದೆ. ಆದರೆ ಕಾರ್ಖಾನೆ ಸ್ಥಾಪನೆಗೆ ಅನುಮತಿಗಾಗಿ ಆಡಳಿತಾತ್ಮಕ ಚಟುವಟಿಕೆಗಳು ವೇಗ ಪಡೆದುಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.